Saturday 14 December 2019

ಸಕಲ ಸಾಧನವೆನಗೆ ಕೈಸೇರಿತು ಮುಕುತಿಯ ankita hayavadana

ರಾಗ ಮುಖಾರಿ ಝಂಪೆತಾಳ

ಸಕಲ ಸಾಧನವೆನಗೆ ಕೈಸೇರಿತು
ಮುಕುತಿಯ ಮಾತಿಗೆ ಬಾರದಾ ಧನವು ||ಪ||

ಸಂಸಾರದಲಿ ಜ್ಞಾನ ಸತಿಸುತರಲಿ ಭಕ್ತಿ
ಕಂಸಾರಿ ಪೂಜೆಯಲಿ ವೈರಾಗ್ಯವು
ಸಂಶಯದ ಜನರಲ್ಲಿ ಸಖತನವ ಮಾಡುವೆನು
ಹಿಂಸೆಪಡಿಸುವೆನು ಜನಸಂಗ ಹರಿಸಂಗ ||೧||

ವಿಷಯಂಗಳಲಿ ಧ್ಯಾನ ಲೌಕಿಕದಲಿ ಮನನ
ವಶವಲ್ಲದಾ ಕಥೆಗಳಲ್ಲಿ ಮನವು
ಹಸನಾಗಿ ಎಣಿಸುವ ಆ ಹಣ ಹೊನ್ನಿನಾ ಜಪವು
ಬಿಸಿಲೊಳಗೆ ಚರಿಸುವುದೆ ಅದೆ ಮಹಾ ತಪವು ||೨||

ಪೀಠ ಪೂಜೆಂಬುವುದು ಲಾಜ ಚೂರಣ ಮೈಯ
ಮಾಟದ ಪಯೋಧರವೆ ಕಳಶ ಪೂಜೆ
ಚೂಟಿಯಲಿ ಉದರದ ಯಾತ್ರೆಯೇ ಮಹಾಯಾತ್ರೆ
ಬೂಟಕದಿ ಅನೃತವನು ಪೇಳುವುದೆ ಮಂತ್ರ ||೩||

ಹೆಂಡತಿಯ ಕೊಂಡೆಯದ ಮಾತುಗಳೆ ಉಪದೇಶ
ಚಂಡಕೋಪವು ಎಂಬ ಅಗ್ನಿಹೋತ್ರ
ಪಂಡಿತನು ನಾನಾಗಿ ಅವಿಧೇಯರನು ಸೇರಿ
ಕಂಡಕಡೆ ವಾದಿಸುವುದು ಅತಿತರ್ಕವಯ್ಯ ||೪||

ಓದಿದೆ ಎಲ್ಲಣ್ಣ ಕಲ್ಲಣ್ಣ ಎನುತಲಿ
ವೇದವೆಂಬುದು ಎನಗೆ ಪಗಡೆ ಪಂಚಿ
ಸಾದಿಸಿ ಈ ಪರಿಯ ಧನವನ್ನು ಕೂಡ್ಹಾಕಿ
ಮೋದಿ ಹಯವದನ ವಿಠ್ಠಲ ನಿನ್ನ ಮರೆತು ||೫||
*********

No comments:

Post a Comment