Thursday 2 December 2021

ಸಂಕ್ರಾಂತಿ ಹಬ್ಬವ ಮಾಡ ಬನ್ನಿರೆ ಮನದ ankita madhwesha krishna SANKRANTI HABBAVA MAADA BANNIRE MANADA





ಸಂಕ್ರಾಂತಿ ಹಬ್ಬ

ಸಂಕ್ರಾಂತಿ ಹಬ್ಬವ ಮಾಡಬನ್ನಿರೆ ಮನದ
ಭ್ರಾಂತಿಗಳನೆಲ್ಲ ಕಳೆಯ ಬನ್ನಿರೆ
ಕಾಂತೀಯರೆಲ್ಲ ಸೇರಿ ಮಾಡಬನ್ನಿರೆ
ಶ್ರೀಕಾಂತನ ಒಲುಮೆ ಪಡೆಯಬನ್ನಿರೆ||ಪಲ್ಲ||

ಬೆಳಗು ಜಾವದಲಿ ಏಳುತ್ತಲಿ
ನಳಿನನಾಭನ ಧ್ಯಾನ ಮಾಡುತ್ತಲಿ
ಎಳ್ಳು  ಹಚ್ಚಿ ಸ್ನಾನ ಮಾಡುತ್ತಲಿ
ನಲ್ಲೆಯರೆಲ್ಲ ನಲಿದಾಡುತ್ತಲಿ||೧||

ಅಂಗಳವನ್ನೆ ಸ್ವಚ್ಛ ಮಾಡುತ್ತಲಿ
ರಂಗವಾಲಿಗಳ್ಹಾಕಿ ನೋಡುತ್ತಲಿ
ತಳಿರು ತೋರಣವನ್ನೆ ಕಟ್ಟುತ್ತಲಿ
ಬಳಲದೆ ಕಾರ್ಯವ ಮಾಡುತ್ತಲಿ||೨||

ಎಳ್ಳಿನ  ದೀಪಗಳ ಹಚ್ಚುತ್ತಲಿ
 ಎಳ್ಳಿನ  ದಾನವ ನೀಡುತ್ತಲಿ
ಎಳ್ಳಿನ  ಭಕ್ಷಗಳ ಮಾಡುತ್ತಲಿ
ಎಳ್ಳು  ಬೆಲ್ಲವ ಸೇರ್ಸಿ ಹಂಚುತ್ತಲಿ||೩||

ಎಳ್ಳಿನ  ಕಹಿಯನ್ನ ಬಿಡಿರೆನ್ನುತ
ಬೆಲ್ಲದ ಸವಿಯನ್ನೆ  ಸವಿರೆನ್ನುತ
ಉಲ್ಲಾಸದಿಂದ  ಎಲ್ಲ ಜನರು ಸೇರುತ್ತ
ಮಲ್ಲ ಮರ್ಧನ ಹರಿಯ ನೆನೆಯುತ್ತ||೪||

ಸಂಕ್ರಾಂತಿ ಹಬ್ಬದ  ಸಂಭ್ರಮವು
ದಕ್ಷಿಣಾಯನ ಕಾರ್ಯ ಮುಗಿಯಿತೆಂದು
ಸ್ನಾನ ಜಪ ತಪಗಳ ಮಾಡುತ್ತಲಿ
ಜ್ಞಾನಿಗಳೊಡನೆ ಸೇರುತ್ತಲಿ||೫||

ಉತ್ತರಾಯಣ ಮಹ ಶ್ರೇಷ್ಠವೆಂದು
ಮಂಗಳ ಕಾರ್ಯಗಳಗೆ ಯೋಗ್ಯವೆಂದು
ಕಾದರು ಭೀಷ್ಮಾಚಾರ್ಯರಂದು
ಮೋದದಿ ಹರಿಪಾದ ಸೇರಲೆಂದು||೬||

ಹೊಸ ಧಾನ್ಯಗಳನೆ ತಂದು ಮಾಡುತ್ತ
ಹೊಸ ಬಟ್ಟೆಗಳನೆ ಹಾಕಿ ನಲಿಯುತ್ತ
ಹಣ್ಣು ಕಬ್ಬು ಬೋರೆ ಫಲವ ತಂದು
 ಸಣ್ಣ ಮಕ್ಕಳಿಗೆ ಹಣ್ಣ ನೆರೆಯುತ್ತ||೭||

ಬದನಿ ಕಬ್ಬು ಬಾಳೆಫಲವ ತಂದು
ಮುದದಿ ಬೀರಿಸಿ ಬರಬೇಕೆಂದು
ಸದಮಲ ಹೃದಯದಿ ಎಳ್ಳು  ಬೆಲ್ಲ
 ಮುದದಿಂದ ಹಂಚಿದರು ನಾರೇರೆಲ್ಲ||೮||

ಭೋಗ ಭಾಗ್ಯಗಳ ನೀಡೆನ್ನುತ
ಭೋಗಿಶಯನನಭಜೀಸುತ್ತ
ನಾಗಶಯನನ ಧ್ಯಾನ ಮಾಡುತ್ತ
ಮಧ್ವೇಶಕೃಷ್ಣನ  ನಿತ್ಯನೆನೆಯುತ್ತ||೯||
***

No comments:

Post a Comment