Friday, 10 September 2021

ಸ್ಮರಿಸಿರೊ ನಮ್ಮ ನರನ ಸಾರಥಿಯ ankita others

 ಶ್ರೀ ತುಪಾಕಿ ವೆಂಕಟರಮಣಾಚಾರ್ಯರ ಕೃತಿ

ರಾಗ - : ತಾಳ -


ಸ್ಮರಿಸಿರೊ ನಮ್ಮ ನರನ ಸಾರಥಿಯ

ಪರಿಹರಿಸುವನು ತಾಪತ್ರಯ ವ್ಯಥೆಯ ll ಪ ll


ರಣಮಂಡಲದಲ್ಲಿ ಗುಣುಗುವ ಕುಂತಿಯ

ತನುಜನ ನೋಡುತ ವಿನಯದಿಂದ

ಘನತತ್ವವನು ಪೇಳಿ ಅಣುಮಹದ್ಗತ

ವಿಶ್ವ-

ತನುವ ತೋರಿದ ಸತ್ಯ ವಿನಯ ಶ್ರೀ ಕೃಷ್ಣನ ll 1 ll


ಸುರನದೀ ತನುಜನ ಶರದಿಂದ ರಕ್ತದ

ಸುರಿವಂದ ತೋರಿ ಶ್ರೀಕರ ಚಕ್ರವ

ಧರಿಸಿ ಓಡುತ ತನ್ನ ಚರಣ ಸೇವಕನೆಂಬ

ಹರುಷ ತಾಳಿ ಬೇಗ ತಿರುಗಿ ಬಂದವನ ll 2 ll


ವಿಜಯ ಸಾರಥಿಯೆಂದು ಭಜಿಸುವ ದಾಸರ

ವಿಜಯ ಪೊಂದಿಸುವನಂಡಜ ರಾಜಗಮನ

ಅಜ ಭವವರದ ಕಂಬುಜನಾಭ ಕಮಲೇಶ

ಭುಜಗ ಧರಾಧೀಶ ಭಜನೀಯಪಾದನ ll 3 ll

***


No comments:

Post a Comment