Wednesday 1 September 2021

ಹರಿಕಥಾಮೃತಸಾರ ಸಂಧಿಗಳ hks phala stuti ಹರಿಕಥಾಮೃತಸಾರ ಫಲ ಸ್ತುತಿ ankita bheemesha vittala

 " ಶ್ರೀ ಭೀಮೇಶ ದಾಸ ಕೃತ ಸಂಧಿ ಮಾಲಾ ಸಂಧಿ "


ಹರಿಕಥಾಮೃತಸಾರ ಸಂಧಿಗ ।

ಳರಹುವೆನು ತತ್ಕೃನ್ಮಹಾತ್ಮರ ।

ಚರಣ ಕರುಣಾ ಬಲವಿರಲು -

ಸನ್ಮಂಗಳಾಚರಣ ।।

ಸರಸ ಸಂಧಿಯ ಪೇಳ್ದ ಸುಜನರಿಗಿಂ ।

ಹರುಷ ಕೊಡುವದು ಎಂದು । ಪರಮಾ ।

ದರದಿ ಕರುಣಾಸಂಧಿ -

ವ್ಯಾಪ್ತಿಸಂಧಿ ಭೋಜನದ ।। 1 ।।

ಸಂಧಿ ಸುಖದ ವಿಭೂತಿ ಸಿರಿ ಗೋ ।

ವಿಂದನಾಜ್ಞದಿ ಪೇಳಿದರು । ಆ ।

ನಂದ ನೀಡುವ ಪಂಚ -

ಮಹಾಯಜ್ಞದ ಸುಸಂಧಿಯನು ।।

ಚಂದದಿಂದಲಿ ಪಂಚತನ್ಮಾ ।

ತ್ರೆ೦ದು ಕರಿಸುವ ಸಂಧಿ ಪೇಳ್ದರು ।

ಇಂದಿರೇಶನ ಪ್ರೀತಿ -

ಬಡಿಸುವ ಮಾತೃಕಾಸಂಧಿ ।। 2 ।।

ವರ್ಣಪ್ರಕ್ರಿಯಾಸಂಧಿ ಸುಜನರ ।

ಕರ್ಣಗಳಗತಿ ಶ್ರಾವ್ಯವೆನಿಪುದು ।

ತೂರ್ಣದಲಿ ಸರ್ವಪ್ರತೀಕ -

ಧ್ಯಾನಪ್ರಕ್ರಿಯವ ।।

ನಿರ್ಣಯಿಸಿದರು ನಾಡಿಯನು । ಸಂ ।

ಪೂರ್ಣ ಗುಣಾನಾಮಸ್ಮರಣೆಯನು ।

ಸ್ವರ್ಣನಾಭಿಪ್ರಮುಖ -

ಜೀವನಪ್ರಕ್ರಿಯಾ ಸಂಧಿ ।। 3 ।।

ವಾಸುದೇವನ ಕರುಣದಿಂದಲಿ ।

ಶ್ವಾಸಸಂಧಿಯ ಪೇಳಿದರು । ಜಗ ।

ದೀಶನಿಂದಲಿ ದತ್ತ-

ಸ್ವಾತಂತ್ರಾಖ್ಯ ಸಂಧಿಯನು ।।

ಲೇಸೆನಿಪ ಸ್ವಾತಂತ್ರ್ಯ ವಿಭಜನ ।

ದಾಸ ಸಾರಿದರೆಲ್ಲ । ಬಿಂಬೋ ।

ಪಾಸನದ ಸಂಧಿಯನು -

ಹರಿಯ ಸ್ತೋತ್ರ ಸಂಧಿಯನು ।। 4 ।।

ಸುಗುಣ ತರತಮಭಾವಸಂಧಿಯು ।

ಮಿಗಿಲು ಆವೇಶಾವತಾರವನು ।

ನಗಧರನ ಭಕ್ತಾಪರಾಧ-

ಸಹಿಷ್ಣು ಸಂಧಿಯನು ।।

ಹಗಲು ಇರಳೆನ್ನದಲೆ ಪಿರಿಯರು ।

ಬಗೆಬಗೆಯ ಶಾಸ್ತ್ರವನು ಶೋಧಿಸಿ ।

ಸುಗತಿಪ್ರದ ಬೃಹತ್ತಾರತಮ್ಯದ 

ಸಾಧನದ ಸಂಧಿ ।। 5 ।।

ದೇವನಂಘ್ರಿಯ  ನೆನೆವುತಲಿ ಕ್ರೀ ।

ಡಾವಿಲಾಸವರೋಹ ಸಂಧಿಯ ।

ದೇವತಾನುಕ್ರಮಣಿಕಾ -

ವಿಘ್ನೇಶ ಸಂಧಿಯನು ।।

ಭಾವವುಳ್ಳಣು ತಾರತಮ್ಯವ ।

ತಾ ವಿರಚಿಸುತ ದೈತ್ಯ ತರತಮ ।

ಭಾವ ನೈವೇದ್ಯ ಪ್ರಕರಣದ -

ಸಂಧಿ ಪೇಳಿದರು ।। 6 ।।

ನೀರಜಾಕ್ಷನ ನೆನೆದು । ಕಕ್ಷಾ ।

ತಾರತಮ್ಯದ ಸಂಧಿ ಪೇಳುತ ।

ಶ್ರೀರಮಣಗರ್ಪಿಸುತಲಿರೆ -

ಭೀಮೇಶ ವಿಠ್ಠಲನ ।।

ಚಾರುಚರಣವ ನೆನೆಯುತನುದಿನ ।

ಧಾರುಣೀಯೊಳು ಮೆರೆದ ನಮ್ಮಯ ।

ಗುರು ಧೊರೆ ಜಗನ್ನಾಥದಾಸಾಖ್ಯ -

ದಾಸರ ನೆನೆವೆನನವರತ ।। 7 ।।

***


No comments:

Post a Comment