Wednesday 4 August 2021

ಕುಂತಿಯ ಮಕ್ಕಳು ನಿಂತಾರು ದ್ವಾರದಿ ankita ramesha

ಕುಂತಿಯ ಮಕ್ಕಳು ನಿಂತಾರು ದ್ವಾರದಿ

ಕಾಂತೆಯರುತುಂಬಿದ ನಗರಿಯಲಿ

ಎಂಥ ಸೊಗಸಮ್ಮ ಬಾಹೋದೆಂಥ ಸೊಗಸಮ್ಮ ಪ.


ಗಂಧ ಕಸ್ತೂರಿ ಧರಿಸಿರಾಯರು

ಚಂದಾಗಿ ನಿಂತಿರಲು ಮೇಲೆ

ಮಂದ ಮಾರುತ ಸುಳಿದು

ಪರಿಮಳ ತುಂಬಿದ ನಗರಿಯಲಿ ಎನುತ 1


ರಾಶಿ ಮಲ್ಲಿಗೆ ಸಂಪಿಗೆ ಮುಡಿದು

ಸೋಸಿಲೈವರು ಇರಲು ಮೇಲೆ

ಬೀಸಿ ಮಾರುತ ಪರಿಮಳ ತಂದು

ಸೂಸಿದ ನಗರಿಯಲಿ ಎನುತ 2


ಮಿತಿ ಇಲ್ಲದೆ ಹಗಲು ಬತ್ತಿ

ಶತ ಕೋಟಿ ದೀವಟಿಗಿ ದೀಪ

ಅತಿಶಯ ಬೆಳಗೊ ನಗರಿಗೆ

ಪ್ರತಿಯಿಲ್ಲ ತಾಯಿ 3


ಹಾದಿ ಬೀದಿ ದ್ವಾರ ಜಗಲಿ

ಹಂದರ ಅಂದದ ತೋರಣಗಳು

ಸಾದಿನಥಳಿ ಕೊಟ್ಟಾವಮ್ಮ

ಮಾಧವ ಬರಲಿಕ್ಕೆ ಎನುತ 4


ಚಿತ್ರ ಬರೆದ ಮನೆಗÀಳ ಮುಂದೆ

ವಿಸ್ತರಿಸಿದ ರಂಗವಲ್ಲಿ

ಉತ್ತತ್ತಿ ಬಾಳೆಯ ಗಿಡಗಳು

ಜತ್ತಾಗಿ ತೋರುವವು ಎನುತ 5


ಕೇರಿ ಕೇರಿ ನಾರಿಯರೆಲ್ಲ

ಸೀರೆ ಕುಪ್ಪಸ ವಸ್ತಗಳಿಟ್ಟು

ಏರಿ ಗೋಪುರ ಅಟ್ಟಾಲಗಳ

ವೀರರ ನೋಡಲು ಎನುತ 6


ಎತ್ತೆತ್ತ ನೋಡಿದರೂ ಜನರು

ಮುತ್ತುರತ್ನದ ವಸ್ತಗಳಿಟ್ಟು

ಹತ್ತಿಗೋಪುರ ಅಟ್ಟಾಲಗಳ

ಧಿಟ್ಟೆಯರು ನಿಂತಾರೆ ಎನುತ 7

ಅಲ್ಲಲ್ಲಿ ನಿಂತಿದ್ದು ಬಾಲೆಯರು

ಝಲ್ಲೆ ಮುತ್ತಿನ ವಸ್ತಗಳಿಟ್ಟು

ಅಲ್ಲೆಲ್ಲೆ ಉಪ್ಪರಿಗೆ ಏರಿ

ಚಲ್ವರ ನೋಡಲು ಎನುತ 8


ಅಲ್ಲಲ್ಲೆ ತುಂಬಿದ ಜನರು

ಮಲ್ಲಿಗೆ ಸಂಪಿಗೆ ಫಲಗಳ ಹಿಡಿದು

ಚೆಲ್ಲಾಡಬೇಕೆಂದು ಐವರಿಗೆ

ಅಲ್ಲೇ ನಿಂತಾರೆ ಎನುತ 9


ಕೃಷ್ಣರಾಯ ಪಾಂಡವರ

ಭೆಟ್ಟಿಯ ಸೌಭಾಗ್ಯ ನೋಡಿ

ಎಷ್ಟು ಹರುಷ ಬಟ್ಟೇವೆಂದು

ಧಿಟ್ಟೆಯರು ನಿಂತಾರೆ ಬೀದಿಲಿ10


ಮಹಲಮ್ಯಾಲೆ ನಿಂತು ಜನರು

ಸಾಲಾಗಿ ಆರತಿಯ ಹಿಡಿದು

ಶ್ರೀ ಲೋಲ ರಾಮೇಶನ ಭಕ್ತರು

ವಾಲಗೈಸೋರಮ್ಮ ಎನುತ 11

****


No comments:

Post a Comment