Sunday 1 August 2021

ಜಿತಮನವ ನೀಡೆನಗೆ ಜಿಷ್ಣುಸಖನೆ ರತಿಪತಿಪಿತ ನಿನ್ನ ankita gopalakrishna vittala

ಜಿತಮನವ ನೀಡೆನಗೆ ಜಿಷ್ಣುಸಖನೆ

ರತಿಪತಿಪಿತ ನಿನ್ನ ಹಿತದಿ ಭಜಿಸುವೆನೊ ಪ.


ದುಷ್ಟ ಇಂದ್ರಿಯಗಳು ಕೆಟ್ಟ ವಿಷಯಗಳಲ್ಲಿ

ಕಟ್ಟ್ಟೆ ಎನ್ನಯ ಮನವ ಸೆಳೆಯುತಿಹವೊ

ಕೃಷ್ಣಮೂರುತಿ ನೀನೆ ದೃಷ್ಟಿಯಿಂದಲಿ ನೋಡಿ

ಒಟ್ಟುಗೂಡಿಸಿ ನಿನ್ನ ಪಾದದಲ್ಲಿಡಿಸೊ 1

ಎಂಟು ಜನ ದುಷ್ಟರು ಆರು ಜನ ಕಳ್ಳರು

ಕಂಟಕರಾಗಿನ್ನು ಕಾಡುತಿಹರೋ

ಎಂಟುದಳಗಳಿಪ್ಪ ನೆಂಟರೆನಗಾಗರೊ

ಎಂಟೆರಡು ಇಂದ್ರಿಯವ ಬಂಧನದೊಳಿರಿಸೊ 2

ಮೂರು ತಾಪಗಳಿಂದ ಮೂರು ಗುಣದೊಳು ತಿರುಗಿ

ಮೂರು ಮಾರ್ಗವ ಕಾಣೆ ಮುರವೈರಿಯೆ

ಮೂರು ಅವಸ್ಥೆಗಳ ವಿವರವರಿಯದ ಎನಗೆ

ದಾರಿ ತೋರಿ ಸಲಹೊ ಕಾರುಣ್ಯನಿಧಿಯೆ 3

ಡಿಂಬ ಮಧ್ಯದಲಿರುವ ಅಂಬರದಲಿ ನಿನ್ನ

ಬಿಂಬರೂಪವ ತೋರೊ ಶಂಭು ಸಖನೆ

ಅಂಬುಜನಾಭ ಎಪ್ಪತ್ತೆರಡು ಸಾಹಸ್ರ

ತುಂಬಿದ ನಾಡಿಯೊಳು ರೂಪಗಳ ತೋರೊ4

ಮನದಲ್ಲಿ ನೆಲಸಿಹನೆ ಮನುಶಬ್ದವಾಚ್ಯನೆ

ಮನದಿಂದ ಭಿನ್ನನೆ ಮನಪ್ರೇರಕ

ಮನವ ನಿನ್ನಲಿ ನಿಲಿಸಿ ಅನುಗಾಲ ಸಲಹುವುದು

ಚಿನುಮಯನೆ ಗೋಪಾಲಕೃಷ್ಣವಿಠ್ಠಲನೆ 5

****


No comments:

Post a Comment