Monday 2 August 2021

ರಂಗನಾಥನ್ನ ಈ ಕಂಗಳಿಂದಲಿ ಕಂಡು ankita gopalakrishna vittala

ರಂಗನಾಥನ್ನ ಈ ಕಂಗಳಿಂದಲಿ ಕಂಡು

ಹಿಂಗಿತೆನ್ನಘದ ಹಿಂಡು ಪ.

ಮಂಗಳಾತ್ಮಕ ದೇವ ಮಮ ಸ್ವಾಮಿ ಸಲಹೆಂದು

ಅಂಘ್ರಿಗಳಿಗೆರಗಿ ನುತಿಪೇ ಸ್ತುತಿಪೇ ಅ.

ಮಾಂಡವ್ಯರಿಗೆ ವಲಿದು ಶ್ರೀನಿಕೇತನ ದೇವ

ಗಂಡಕೀಶಿಲೆ ರೂಪದಲ್ಲಿ

ಅಂಡಜವಾಹನನು ಉದ್ಭವಿಸಿ ಸ್ವರ್ಣಾದ್ರಿ

ಎಂಬ ಸುಕ್ಷೇತ್ರದಲ್ಲೀ

ಹಿಂಡುಭಕ್ತರ ಸೇವೆ ಕೈಯಕೊಳುತ ಬದಿಯಲ್ಲಿ

ನಿಂದು ವಿಗ್ರಹ ರೂಪದಲ್ಲೀ

ಕಂಡು ಪುಳಕಾಂಕಿತದಿ ಕರುಣ ಮೂರ್ತಿಯ ನುತಿಸಿ

ಕೊಂಡಾಡಿ ದಣಿದೆ ನಿಂದೂ ಇಂದೂ 1

ಶಂಖಚಕ್ರಾಂಕಿತದ ಚತುರ್ಭಜವು ಶ್ರೀವತ್ಸ

ಪಂಕಜಾಕ್ಷಿಯರುಭಯದಿ

ಶಂಕೆಯಿಲ್ಲದ ಭಕ್ತರಿಗೆ ವಲಿವ ಸೌಂದರ್ಯಾ

ಲಂಕಾರ ಉಡಿಗೆ ಮುದದಿ

ಪಂಕಜಾಸನ ಮುಖ್ಯದಿವಿಜಗಣ ಸೇವಿತನು

ಕಿಂಕರರಿಗೊಲಿವ ದಯದೀ

ವಂಖಿ ಬಾಪುರಿ ತೋಳು ಕಡಗ ಕಾಲ್ಗೆಜ್ಜೆಗಳು

ಕಂಕಣ ಕಿರೀಟ ನಿಟ್ಟಾ ದಿಟ್ಟಾ 2

ಆಗಮವ ಅಜಗಿತ್ತು ಸುರರಿಗಮೃತವಿತ್ತು

ಭೂದೇವಿ ಭಯ ಬಿಡಿಸಿದಾ

ಬೇಗ ಕಂಬದಿ ಬಂದು ಮಗುವ ರಕ್ಷಿಸಿ ಬಲಿಯ

ಯಾಗದಲ್ಲಿ ಭೂ ಬೇಡಿದಾ

ನೀಗಿ ಕ್ಷತ್ರಿಯ ಕುಲ ದಶಶಿರಿನ ಸಂಹರಿಸಿ

ಮಾಗಧನ ಬಲವ ಮುರಿದಾ

ನೀಗಿ ಅಂಬರ ಕಲ್ಕಿ ಗೋಪಾಲಕೃಷ್ಣವಿಠಲಾ

ಮಾಗಡಿ ತಿರುಮಲೇಶಾ ಶ್ರೀಶಾ 3

****


No comments:

Post a Comment