Thursday 20 May 2021

ಭಕ್ತರ ಭಿಡಿಯ guruvijaya vittala ankita suladi ಹರಿ ಭಕ್ತವಾತ್ಸಲ್ಯತೆ ಸುಳಾದಿ BHAKTARA BHIDIYA HARI BHAKTA VATSALYATE SULADI

 Audio by Vidwan Sumukh Moudgalya

 

ಶ್ರೀ ಮೊದಲಕಲ್ಲು ಶೇಷದಾಸಾರ್ಯ ವಿರಚಿತ 


 ಶ್ರೀ ಹರಿಯ ಭಕ್ತವಾತ್ಸಲ್ಯತೆಯ ಸುಳಾದಿ 

(ಸ್ತೋತ್ರ ವಿಭಾಗ, ಶ್ರೀ ಹರಿಯ ಭಕ್ತವಾತ್ಸಲ್ಯತೆ ಪಾರ್ಥನಾದ ಪಾಂಡವಾದಿಗಳಿಗೆ ಸೇವಕನಾಗಿ ಆಪ್ತನಾಗಿ ರಕ್ಷಣೆ ಮಾಡಿದ ಚರಿತ್ರೆ. ಭಕ್ತರ ಮಹಿಮಾ ಭಕ್ತರಿಗೆ ಪಾಪಕೃತ್ಯಗಳೇ ಇಲ್ಲ)


 ರಾಗ : ಅಮೃತವರ್ಷಿಣಿ 


 ಧೃವತಾಳ 


ಭಕ್ತರ ಭಿಡಿಯ ನಿನಗೆ ಅತ್ಯಂತವಾಗಿ ಉಂಟು

ಭಕ್ತರಾರ್ಜಿತವಾದ ಭಾಗ್ಯ ನಿಧೆ

ಸಕಲ ವೈಭವ ಸದ್ಗುಣ ಗಣ ನಿಧಿಯೆ

ಲಕುಮಿ ಬೊಮ್ಮಾದಿಗಳಿಗೆ ಸ್ವಾಮಿ ಎನಿಸಿ

ಏಕ ದೇಶಾಧಿಪತಿ ಉಗ್ರಶೇನನ್ನ ತುತಿಸಿ ಪ

ರಾಕು ಪೇಳಿದಿ ನಿನ್ನ ಕೃಪೆಗೇನೆಂಬೆ

ಏಕಾಮೇವಾದ್ವಿತಿಯನ್ನಾಸ್ತಿ ಎನಿಸಿಕೊಂಡು

ಭೃಕುಟಿ ಸನ್ನಿಧಿಗೈದಿ ವರವ ಬೇಡಿದಿಯೆಂತೊ

ಪ್ರಕೃತಿ ಪ್ರಾಕಾಮ್ಯಾದಿ ಆಶ್ಚರ್ಯ ಪೂರ್ಣ ನೆನಿಸಿ

ಭಕ್ತ ಬಲಿಯದಾನ ಬೇಡಿದಯ್ಯಾ

ನೋಕನೀಯನೆ ಮೋದ ಪ್ರಮೋದ ಆನಾತ್ಮ

ಲೋಕ ಲೋಕದಿ ಜೀವರಾಶಿಗಳಿಗೆ

ಸಾಕುವಿ ಅನ್ನೋದಕ ದ್ವಾರ ನಿಮಿತ್ಯ ಮಾಡಿ

ರಿಕ್ತ ಸ್ತ್ರೀಯರ ಅನ್ನ ಯಾಚಿಸಿದೆಂತೊ

ನಖ ಶಿಖ ಪರಿಪೂರ್ಣ ನಿರ್ದೋಷನೆನಿಸಿಕೊಂಡು

ಗೋಕುಲ ಸ್ತ್ರೀಯರನ್ನು ವೊಲಿಸಿದಯ್ಯಾ

ವಿಖನಸಾದಿ ದೇವ ದಾನವ ಸಮೂಹಕ್ಕೆ

ಶಕುತಿಗಳನೆ ಯಿತ್ತು ಪೊರೆವನಾಗಿ

ಭಕ್ತ ಭೀಷ್ಮಜನು ನಿಜ ಸತಿಯ ವ್ಯಾಜದಿಂದ

ಭೀಕರವಾದ ಯುದ್ಧವನ್ನು ಮಾಡಲಾಗಿ ಅ

ಶಕ್ತನಂದದಿ ಸ್ವಪ್ನ ಪರಿಯಾಗಿ ತೋರಿಸಿದಿ

ಭಕ್ತವತ್ಸಲ ನಿನ್ನ ದಯಕೆ ನಮೊ ನಮೊ

ಪ್ರಕಟ ಮೂರುತಿ ಗುರುವಿಜಯವಿಠಲರೇಯ 

ಭಕ್ತರೇ ಬಲ್ಲಿದರು ನಿನ್ನ ಬಲದಿ ಸ್ವಾಮಿ ॥೧॥


 ಮಟ್ಟತಾಳ 


ನಿತ್ಯ ಮುಕ್ತಳಾದ ಲಕುಮಿಗೆ ಸಿಲುಕದ

ಅತ್ಯುತ್ತಮನೆ ಪಾಂಡುತನಯರ ಮನೆಯಲ್ಲಿ

ತೆತ್ತಿಗನಂದದಲಿ ವ್ಯಾಪಾರ ಮಾಡಿ

ಹಸ್ತಿಪುರಿಗೆ ಪೋಗಿ ಸಂಧಾನವ ಮಾಡಿ

ಪಾರ್ಥಂಗೆ ವೊಲಿದು ಪರಿಪೂರ್ಣ ಕರುಣದಲಿ ಸಾ

ರಥ್ಯ ಕರ್ಮವನು ಪ್ರೀತಿಯಿಂದಲಿ ಮಾಡಿ

ಮಿತ್ರನೆನಿಸಿಕೊಂಡು ಧರೆಯೊಳು ಮೆರೆಸಿದಿ

ಭಕುತರ ವಿಷಯದಲಿ ಎಷ್ಟು ಕರುಣ ನಿನಗೆ

ಪುತ್ರನ ತೊಡೆಯಲ್ಲಿ ಕುಳ್ಳಿರಿಸಿ ಕೊಳಲು

ಉತ್ತಮಾಂಗ ಕೆಳಪಾದ ಸೋಕುವದೆಂತೆಂಬ

ಚಿತ್ತವಾಗದು ಪಿತಗೆ ಅತ್ಯೋಚ್ಛಿತವಾದ ಹಿತ ಮಾಳ್ಪವನಾಗಿ

ಭಕ್ತರ ಮಹಿಮೆಯನು ವಿಸ್ತಾರ ಮಾಳ್ಪ 

ಮುಕ್ತರಾಶ್ರಯ ಗುರುವಿಜಯವಿಠಲರೇಯ 

ಪೊತ್ತವನು ನೀನೆ ಸರ್ವ ಕಾಲದಿ ಎಮ್ಮ ॥೨॥


 ತ್ರಿವಿಡಿತಾಳ 


ಸರಸಿಜಭವ ಹರ ಸುರರಿಗೆ ಧೊರಿ ಎನಿಸಿ

ನರನ ಸಾರಥಿ ಕರ್ಮ ಮಾಳ್ಪವನಾಗಿ

ತುರಗಗಳಿಗೆ ಎಚಿದ ಕಾರ್ಮುಕಗಳ ಕಿತ್ತಿ

ಸುರರಿಗಭಯ ಕೊಡುವ ಹಸ್ತದಿಂದ ಚ

ಪ್ಪರಿಸಿ ಪುಷ್ಟಿಯ ಗೈಸಿ ಜಲತೃಣದಲ್ಲಿ

ಹರುಷದಿಂದಲಿ ತಂದು ರಥಕೆ ಬಿಗಿದು

ನರನಿದ್ದೆಡೆಗೆ ತಂದು ನಿಲ್ಲಿಸಿ ದಿವಿಜರ

ಭರದಲ್ಲಿ ನಿನ್ನ ಔದಾರತನಕೆ

ಕರಮುಗಿದು ನಮಿಸಿ ಜಯ ಜಯ ಜಯವೆಂದು

ಪಾರ್ಥನ ಭಾಗ್ಯ ಮಹಿಮೆ ವರ್ಣಿಸಿದರು

ಸರಸಿಜಾಂಡವನ್ನು ಇಚ್ಛಾಮಾತ್ರದಲಿಂದ ಸಂ

ಹರಿಪ ಶಕ್ತನಾಗಿ ಸುಮ್ಮನಿದ್ದು

ಅರಿಗಳ ವರ್ಗವೆಲ್ಲ ಹಸನ ಮಾಡಿದನೆಂಬ

ವರಖ್ಯಾತಿ ಮಾತ್ರಕ್ಕೆ ತಂದುಯಿತ್ತೇ

ಪರಿಪೂರ್ಣ ಸ್ವಾತಂತ್ರ ಸರ್ವತ್ರ ಸಮಸ್ಥಿತ

ಚರಿುಯಕ್ಕೆ ನಮೊ ನಮೊ ಆವಕಾಲ

ಸುರದ್ರುಮ ನಾಮ ಗುರುವಿಜಯವಿಠಲರೇಯ 

ಶರಣರ್ಗೆ ಆವಾಸಾ ಸ್ಥಾನ ನೀನೆ ॥೩॥


 ಅಟ್ಟತಾಳ 


ಭಕ್ತರ್ಗೆ ಪಾಪದ ಕೃತ್ಯಗಳೇ ಇಲ್ಲ

ಕೃತ್ಯಗಳಿದ್ದರು ಲೇಪನವೇ ಇಲ್ಲ

ಕೃತ್ಯವ ಲೇಪಿಸೆ ಭೋಕ್ತವ್ಯವೇ ಇಲ್ಲ

ಭೋಕ್ತವ್ಯವಾದರು ನರಕಯಾತನೆ ಇಲ್ಲ

ಭಕ್ತನಾದವ ಒಂದು ದೃಷ್ಕೃತ್ಯ ಮಾಡಲಾಗಿ

ಉತ್ತಮರ ದೋಷ ನೀಚರುಂಬುವರು

ಯುಕ್ತಿ ಪೂರ್ವಕವಾಗಿ ಇನ್ನಿತು ಮಾಡುವಿ

ಪ್ರತ್ಯಕ್ಷವೇ ಸರಿ ಸುರಪತಿ ದೋಷವ ಧ

ರಿತ್ರಿಗೆ ವಿಭಾಗ ಮಾಡಿದಿ ಕಾರುಣ್ಯದಿ

ಇತ್ತಲೀಗಲು ಅದರಂತೆ ಸರಿಯನ್ನು

ಮುಕ್ತಾರಾಶ್ರಯ ಗುರುವಿಜಯವಿಠಲರೇಯ 

ಮಿ್ಟತ್ರ ನೀನೆ ಗತಿ ಆವ ಕಾಲದಲಿ ॥೪॥


 ಆದಿತಾಳ 


ಭಕ್ತರ ಭಾಗ್ಯವನ್ನು ವರ್ಣಿಪರಾರಯ್ಯ

ಶಕ್ತನಾದರು ನೀನು ಭಕ್ತರಿಗೆ ಸೋಲುವಿ

ಸಪ್ತ ದ್ವಯ ಲೋಕಕ್ಕೆ ಕರ್ತೃ ನೀನಾದರು

ಭಕ್ತರ ವಶನಾಗಿ ಕರದಲ್ಲಿ ಬರುವಿ

ಭಕ್ತರು ನಿನ್ನ ನೋಳ್ಪ ಸೌಖ್ಯದ ವ್ಯತಿರಿಕ್ತ

ಮುಕ್ತಿಯನಾದರು ಅಪೇಕ್ಷೆ ಮಾಡರಯ್ಯ

ಪ್ರತ್ಯುಪಕಾರ ಗುರುವಿಜಯವಿಠಲರೇಯ 

ಕೃತ್ಯಗಳೆಣಿಸುವ ಭಕ್ತರುಗಳುಕಂದಿ ॥೫॥


 ಜತೆ 


ಭಕ್ತರಧೀನತೆ ಬಲು ಭೂಷಣೆಲೊ ನಿನಗೆ 

ಉತ್ತಮೋತ್ತಮ ಗುರುವಿಜಯವಿಠಲರೇಯ ॥೬॥

*****

No comments:

Post a Comment