Sunday 8 December 2019

ಜಗದ ಜೀವರ ನೋಡಿ prasannavenkata ankita suladi ಹರಿ ಮಹಿಮೆ ಸುಳಾದಿ JAGADA JEEVEERA NODI HARI MAHIME SULADI

Audio by Mrs. Nandini Sripad

ಶ್ರೀ ಪ್ರಸನ್ನ ವೆಂಕಟದಾಸಾರ್ಯ ವಿರಚಿತ 

 ಶ್ರೀಹರಿ ಮಹಿಮೆ ಸುಳಾದಿ 

( ಈ ಸುಳಾದಿಯಲ್ಲಿ ಜಗನ್ನಾಟಕ ಸೂತ್ರಧಾರಿಯಾದ ಶ್ರೀಹರಿಯು ಪ್ರಪಂಚಕ್ಕೆ ನಿಯಾಮಕನಾಗಿ ಜೀವರ ತಾರತಮ್ಯವನ್ನು ಅನುಸರಿಸಿ ಅವರಿಗೆ ಗತಿಯನ್ನು ಕೊಡುತ್ತಾನೆಂದೂ , ಬ್ರಹ್ಮಾಂಡವನ್ನು ನಿರ್ಮಿಸುವ ಮತ್ತು ಅದನ್ನು ಲಯ ಮಾಡುವ ಭಗವಂತನ ಅಚಿಂತ್ಯ ಮಹಿಮೆಯನ್ನು ದಾಸಾರ್ಯರು ಸಾರಿ ಹೇಳಿದ್ದಾರೆ. )

 ರಾಗ ಮುಖಾರಿ 

 ಧ್ರುವತಾಳ 

ಜಗದ ಜೀವರ ನೋಡಿ ಯುಕುತಿಯಲಿ ಸೃಜಿಸುವ
ಮಗನ ಪಡೆದಿರುವೆ ನಾಭಿಕಮಲದಿ
ದೃಗಮೂರನೆಂಬ ಮೊಮ್ಮಗನಿಹನು ನಿನಗೆಲೆ
ಖಗಗಮನಗಣಿತಗುಣನಿಲಯ ದೇವ
ಮಗುಳೈದುಗಣೆಯಿಂ ಮೂಜಗವ ಮೋಹಿಪ ಕಿರಿಯ
ಮಗನುಳ್ಳ ಸಿರಿಯು ಸಂಗಡಲೆ ಮುಕುಂದ -
ದ್ಯುಗಮನೆ ಲೋಕಪಾವನೆ ಪವಿತ್ರೆಯೆಂಬ
ಮಗಳು ಹುಟ್ಟಿದಳು ವಾಮಾಂಘ್ರಿವೆರಳೊಳು
ಮಗುವೆನಿಸಿ ಗೋಕುಲದೆಶೋದೆನಂದನರ ಮು -
ದ್ದುಗಳ ಸಲಿಸಿದೆ ಮಹಾಮಹಿಮ ಕೃಷ್ಣ
ಆಗಮಕೋಟಿಗಳು ನಿನ್ನರಸಿ ಕಾಣವು ಗಡ
ಬಗೆಯಲಳವಾರಿಗಹುದಯ್ಯ ಜೀಯ
ವಿಗಡ ಪೋಕರನಳಿಸಿ ಆತ್ಮಜೀವರ ಬೆಳು -
ವಿಗೆಯ ತೋರಿಸುವೆ ವೈಷಮ್ಯವಿದೂರ
ಜಗದಾತ್ಮ ಜಗವ್ಯಾಪ್ತ ಜಗದುದರ ಜಗದ್ವರದ
ಜಗದೇಕ ಮೂರುತಿ ಪ್ರಸನ್ನವೆಂಕಟೇಶ ॥ 1 ॥

 ಮಠ್ಯತಾಳ 

ಆಟವಾಡುವ ಬಾಲನೊಳು ಜಗ -
ನ್ನಾಟಕ ನೀನೆನಿಸಿ ಜಗದರ
ಕೋಟಲೆಗೆ ನಿಯತ ಕಾರಣ ತರತಮ
ಕೋಟಿಜೀವರ ಪೃಥಗ್ಗತಿಯನೀವ ಪ್ರಸ -
ನ್ವೆಂಕಟ ಹಾಟಕಗೆ ಸಾಮ್ರಾಟ ವಿಭು ನೀ ॥ 2 ॥

 ರೂಪಕತಾಳ 

ಬೊಮ್ಮಾಂಡನಂತವ ನಿರ್ಮಿಸೆತ್ತೆಳೆದಾಡಿ
ಅಮ್ಮಗೋಪಿಗಮ್ಮಿ ಬೇಡಿ
ರಮ್ಮೆಯನಾಳಿ ಗೋವಳೆಯರೊಡನೆ ಕೇಳಿ
ಒಮ್ಮೆ ಗುಂಜಿಯ ಮಾಲೆ ತಾಳಿ -
ದ್ಯಮ್ಮಮ್ಮಾಚಿಂತ್ಯಮಹಿಮ ಕ್ರೀಡಾನಂತ
ನಮ್ಮ ಪ್ರಸನ್ವೆಂಕಟ ತಿಮ್ಮ ॥ 3 ॥

 ಝಂಪೆತಾಳ 

ಒರಳನೆಳೆದು ಯಮಳಾರ್ಜುನರುದ್ಧೃತ
ಸರಳತಾಣದ ಹಬ್ಬದಂದು ಮಾತುಳನೊದ್ದ
ಗರಳದಂತನ ಶಿರವೇರಿ ನಾಟ್ಯಾಡಿದ
ಅರಳದಾವರೆ ಮುಖ ಪ್ರಸನ್ನವೆಂಕಟ 
ತರಳರೊಳಬಡುತ ಬೆರಳಲಗ ಪೊತ್ತ
ತರಳ ಚಿನ್ಮಯ ತರಳನೆ ॥ 4 ॥

 ತ್ರಿಪುಟತಾಳ 

ಒಂದನುಳಿಸದೆಲ್ಲಾನೊಂದಿಸಿ ಜಲದೊಳಾ -
ನಂದದ ಲೀಲೆಯೊಳೊರಗಿದೆಯ
ಒಂದು ಗುಣದಿರವ ಇಂದಿರೆಗರುಹದಾ
ಒಂದ್ವಟ ಪರ್ಣದೊಳೊಂದಿದ ಬಾಲ ಮು -
ಕುಂದ ಪ್ರಸನ್ನವೆಂಕಟ ಗೋವಿಂದ ॥ 5 ॥

 ಜತೆ 

ನಿನ್ನಾ ಮೂರುತಿ ನಿನ್ನಾ ಕೀರುತಿ
ನಿನ್ನಾ ಕಥಾಮೃತವೆನ್ನ ಕಣ್ಣ ಕಿವಿ
ನಾಲಿಗೆಯಲ್ಲಿ ಪೂರ್ಣಿಸು ಪ್ರಸನ್ವೆಂಕಟೇಶ ॥
***********


No comments:

Post a Comment