Friday 27 December 2019

ವೆಂಕಟೇಶ ನಿನ್ನ ನಂಬಿದೆ ಎನ್ನ ankita varaha timmappa

by ನೆಕ್ಕರ ಕೃಷ್ಣದಾಸ
ಯಮುನಾಕಲ್ಯಾಣಿ ರಾಗ ಅಷ್ಟತಾಳ

ವೇಂಕಟೇಶ ನಿನ್ನ ನಂಬಿದೆ ಎನ್ನ
ಸಂಕಟವನು ಪರಿಹರಿಸಯ್ಯ ನೀನು ||ಪ||

ಒಡಲೆಂಬ ಕಡಲೆಡೆಗೊಂಡಿಹ ಹಡಗು
ಕಡೆಯ ಕಾಣ ಬಹು ಜಡದಿಂದ ಗುಡುಗು
ಜಡಿಯುತ್ತ ಬರುತಿಹ ಮಳೆ ಮುಂದೆ ತೊಡಗು
ದಡವ ಸೇರಿಸೋ ಎನ್ನ ಒಡೆಯ ನೀ ಕಡೆಗು ||೧||

ಅಣುರೇಣು ತೃಣಕಾಷ್ಠದೊಳಗಿದ್ದು ನೀನು
ಕ್ಷಣಕ್ಷಣ ಆರೈವ ಗುಣ ನಿನ್ನದೇನು
ಪ್ರಣವರೂಪನೇ ನಿನ್ನ ಚರಣಕ್ಕೆ ನಾನು
ಮಣಿವೆನು ಮನ್ನಿಸು ವರಕಾಮಧೇನು ||೨||

ನಾರಾಯಣ ನರಹರಿ ಜಗನ್ನಾಥ
ದಾರಿದ್ರ್ಯ ದುಃಖ ನಿರ್ಮುಕ್ತ ನೀ ತಾತ
ಸಾರಿದವರ ಸಂಸಾರದ ದಾತ
ಮಾರಿದ ಮನವಕೊಂಬರೆ ನೀನೆ ಪ್ರೀತ ||೩||

ಉತ್ತಮವಾದ ಶ್ರೀಶೈಲನಿವಾಸ
ಭಕ್ತರ ಸಲಹುವ ಬಿರುದುಳ್ಳ ಈಶ
ಚಿತ್ತವು ತಿಳಿದೆನ್ನ ಕಾಯೋ ಸರ್ವೇಶ
ನಿತ್ಯ ಮಂಗಲವೀವ ವಸ್ತು ಲಕ್ಷ್ಮೀಶ ||೪||

ವರಾಹ ತಿಮ್ಮಪ್ಪನು ಒಲಿದೆನ್ನ ಕರೆದು
ಆರಿದ ಬಾಯೊಳು ಅಮೃತವನೆರೆದು
ದೂರವಾಗದೆ ಅಡಿಗಡಿಗೆನ್ನ ಹೊರೆದು
ಏರುಗಂಡಪರಾಧ ಎಲ್ಲವ ಮರೆದು ||೫||
********

No comments:

Post a Comment