Friday 27 December 2019

ಭಯ ನಿವಾರಣವಾದ ಹರಿಯ ನಾಮಗಳು ankita varaha timmappa

by ನೆಕ್ಕರ ಕೃಷ್ಣದಾಸ
ಶಂಕರಾಭರಣ ರಾಗ ತ್ರಿವಿಡೆ ತಾಳ

ಭಯನಿವಾರಣವಾದ ಹರಿಯ ನಾಮಗಳು
ದಯಾನಿಧಿ ತೋರಿದ ಎನ್ನ ಜಿಹ್ವೆಯೊಳು ||ಪ||

ವಸುದೇವಾತ್ಮಜ ಕೇಶವ ದೇವಕಿ
ಬಸುರೊಳಗುದಿಸಿದ ನಾರಾಯಣನು
ಎಸೆದು ನಿಂದನು ಗೋಕುಲದೊಳು ಮಾಧವ
ಕುಸುಮನಾಭನು ಗೋವಿಂದ ನಂದ ನಂದನಕಂದ ||೧||

ದುಷ್ಟಪೂತನಿಯನ್ನು ವಿಷ್ಣುವೆ ಕೊಂದನು
ತೊಟ್ಟಿಲ ಶಿಶುವಾಗಿ ಮಧುಸೂಧನ
ಮೆಟ್ಟಿಕೊಂದನು ತ್ರಿವಿಕ್ರಮ ಶಕಟನ
ಕಟ್ಟಿಗೆ ಸಿಲುಕಿದನು ವಾಮನ ಯಶೋದೆಗೆ ||೨||

ಬೆಣ್ಣೆಯ ಮೆದ್ದನು ಮಿಣ್ಣಗೆ ಶ್ರೀಧರ
ಕಣ್ಣಿಯ ಕರುವನು ಹೃಷಿಕೇಶನು
ಉಣ್ಣಬಿಟ್ಟನು ತಾಯ ಮೊಲೆಗೆ ಪದ್ಮನಾಭ
ಸಣ್ಣವ ಕ್ಷಣದೊಳು ದಾಮೋದರನಾದ ||೩||

ವಾಸುದೇವನು ದ್ವಾರಾವತಿವಾಸನೆನಿಸಿದ
ಸಾಸಿರ ನಾಮನು ಸಂಕರುಷಣನು
ಅಸುರನಾಗಿಯೆ ಪ್ರದ್ಯುಮ್ನನೆಸೆದನು
ದೋಷರಹಿತನಾದ ಅನಿರುದ್ಧನು ||೪||

ಉತ್ತಮನಾಗಿಯೆ ಪುರುಷೋತ್ತಮನೆಸೆದನು
ಅರ್ಥಿಯಿಂದಲೆ ಅಧೋಕ್ಷಜನಾಮದಿ
ಮೃತ್ಯುವಾದನು ದೈತ್ಯಕುಲಕೆಲ್ಲ ನರಸಿಂಹ
ಮುಕ್ತಿದಾಯಕನಾದನಚ್ಯುತನಾಮದಿ ||೫||

ಕಡಲನಡುವೆ ಜನಾರ್ದನನೆನಿಸಿ ತಾನು
ಹಡಗನು ಸೇರಿಯೆ ಬಂದನುಪೇಂದ್ರನು
ಉಡುಪಿಯ ಸ್ಥಳದೊಳು ಹರಿಯೆಂಬ ನಾಮದಿ
ಕಡಗೋಲ ಕೈಯೊಳು ಹಿಡಿದು ನಿಂದಿಹ ಕೃಷ್ಣ ||೬||

ಇಪ್ಪತ್ತು ನಾಲ್ಕು ನಾಮದ ಸ್ವಾಮಿಯ
ತಪ್ಪದೆ ಒಂಬತ್ತು ಪೂಜೆಯಗೊಂಬನು
ಸರ್ಪಗಿರಿಯ ವರಾಹ ತಿಮ್ಮಪ್ಪರಾಯನು
ಒಪ್ಪುಗೊಂಡನು ಮಧ್ವರಾಯನಾಗಮದೊಳು ||೭||
********

No comments:

Post a Comment