Thursday 12 December 2019

ಆದಿತತ್ವದ ಸಾರ ತಿಳಿಯದೆ ಭೇದಾಭೇದ ankita mahipati

ಭೈರವಿರಾಗ ದಾದರಾ ತಾಳ

ಆದಿತತ್ವದ ಸಾರ ತಿಳಿಯದೆ ಭೇದಾಭೇದವಿದ್ಯಾತಕೆ
ವೇದ ಉಪನಿಷದ್ವಾಕ್ಯವರಿಯದೆ ಗಾಧ ಸೂಸುವದ್ಯಾತಕೆ ಹರಿಭಕುತಿಗೆ ||ಧ್ರುವ||

ಮೂಲದಲಿ ಮನಮೈಲ ತೊಳಿಯದೆ ಜಲಮುಣುಗುವದಿದ್ಯಾತಕೆ
ಬಲುವಭಾವದ ಕೀಲ ತಿಳಿಯದೆ ಮಾಲೆಜಪ ಕೈಯಲ್ಯಾತಕೆ
ನೆಲೆಯುಗೊಳ್ಳದೆ ಮೂಲಮೂಲ ಮೂರ್ತಿಯ ಮ್ಯಾಲೆ ತಲೆ ಮುಸುಕ್ಯಾತಕೆ
ಹಲವು ಜನ್ಮದ ಹೊಲಿಯು ತೊಳಿಯದೆ ಶೀಲ ಸ್ವಯಂಪಾಕ್ಯಾತಕೆ ||೧||

ಹರಿಯ ಚರಣಾಂಬುಜವನರಿಯದೆ ಬರಿಯ ಮಾತಿನ್ಯಾತಕೆ
ಗುರುವಿನಂಘ್ರಿಯ ಗುರುತವಿಲ್ಲದೆ ಶರಣಸಾವಿರವ್ಯಾತಕೆ
ತುರಿಯಾವಸ್ಥೆಯೊಳರಿತು ಕೂಡದೆ ತೋರಿಕೆಯ ಡಂಭವ್ಯಾತಕೆ
ತರಣೋಪಾಯದ ಸ್ಮರಣೆ ಇಲ್ಲದೆ ತರ್ಕಭೇದಗಳ್ಯಾತಕೆ ||೨||

ಅಂತರಾತ್ಮದ ತಂತುವಿಡಿಯದೆ ಗ್ರಂಥಪಠಣಗಳ್ಯಾತಕೆ
ಕಂತುಪಿತನಾರ್ಚನೆಯನರಿಯದ ತಂತ್ರಮಂತ್ರಗಳ್ಯಾತಕೆ
ಸಂತತ ಚಿಂತಾಯಕನಾ ನೆನೆಯದೆ ಮಂತ್ರಮಾಲೆಗಳ್ಯಾತಕೆ
ಪಂಥವರಿಯದೆ ಪರಮಯೋಗದಾನಂತವ್ರತವಿದುವ್ಯಾತಕೆ ||೩||

ಸೋಹ್ಯವರಿಯದೆ ಶ್ರೀಹರಿಯ ನಿಜಬಾಹ್ಯರಂಜನೆ ಏತಕೆ
ಗುಹ್ಯ ಮಹಾಮಹಿಮೆಯು ತಿಳಿಯದೆ ದೇಹ ಅಭಿಮಾನ್ಯಾತಕೆ
ಸಾಹ್ಯವಿಲ್ಲದೆ ಶ್ರೀಹರಿಯ ದೇಹದಂಡನಿದ್ಯಾತಕೆ
ಮಹಾವಾಕ್ಯದಿತ್ಯರ್ಥವರಿಯದೆ ಸಾಯಸ ಬರುವದ್ಯಾತಕೆ ||೪||

ಭಾಗ್ಯ ಭಕುತಿ ವೈರಾಗ್ಯವಿದು ನಿಜಯೋಗಾನಂದದ ಭೂಷಣ
ಶ್ಲಾಘ್ಯವಿದು ತಾ ಇಹಪರದೊಳು ಸುಗಮ ಸುಪಥ ಸಾಧನ
ಭೋಗ್ಯಭೋಗದ ಸಾರ ಸುಖವಿದು ಯೋಗಿ ಮಾನಸ ಜೀವನ
ಬಗೆಬಗೆಯಲನುಭವಿಸಿ ಮಹಿಪತಿಯೋಗ್ಯನಾಗೊ ಸನಾತನ ||೫||
*********

No comments:

Post a Comment