Friday 27 December 2019

ಶ್ರೀಗುರುರಾಘವೇಂದ್ರ ಶರಣರ ಸುರ ankita jayesha vittala

ಶ್ರೀ ಜಯೇಶವಿಠಲದಾಸರ ಕೃತಿ 

 ರಾಗ ಮೋಹನ     ಆದಿತಾಳ 

ಶ್ರೀಗುರುರಾಘವೇಂದ್ರ ಶರಣರ ಸುರ । 
ತರುವೆ ಕರುಣಸಾಂದ್ರ ॥ ಪ ॥
ಧರೆಯೊಳು ನಿನ್ನ ಶ್ರೀಚರಣಕಮಲಪ್ರಭ ।
ಮೆರೆವೋದು ಬಹುಪರಿ ಉದ್ಧರಿಸು ಈ ಶರಣನ್ನ॥ಅ ಪ॥

ವಿಮಲಸುಕೃತ ಸ್ವರೂಪ ದರುಶನ ಮಾತ್ರದಿ ಭವ । 
ಶ್ರಮಹರಿಸುವ ಪ್ರತಾಪ ।
ರಮೆಅರಸನ ಗುಣಸಮುದಾಯದೊಳು ಮಗ್ನ ।
ಭ್ರಮೆರಹಿತ ಸ್ಥಿರಚಿತ್ತ ನಮೊ ನಮೊ ನಮೋ ನಿನಗೆ ॥
ಅಮಿತಮತಿಯ ಕರುಣಕವಚವ । 
ಅಮಿತಕಾಲದಿ ಕೊಟ್ಟು ಮೆರೆಯುವ ।
ಅಮಿತ ಮಂಗಳದಾಯಿ ತ್ವತ್ಪದ । 
ಕಮಲ ವೈಭವ ಸಲಹಲೆನ್ನನು ॥ 1 ॥

ಪಾವನ ಯತಿರನ್ನ ಲಾಲಿಸು ವಾಕು । ಸಾವಧಾನದಿ ಘನ್ನ ।
ಭೋವಿಧ ಭವಬವಣೆ ದಾವಾಗ್ನಿಯೊಳು ನೊಂದೆ ।
ಶ್ರೀವರನದಾಸ ಕಾವ ದೃಷ್ಟಿಲಿ ನೋಡು ॥
ದೇವದೇವನ ನಿತ್ಯಮಂಗಳ । 
ಭಾವ ರೂಪಗುಣಕ್ರಿಯಂಗಳ ।
ಆವಕಾಲಕು ಬಿಡದೆ ನೋಡುವ ।
ಭೂ ವಿಬುಧಮಣಿ ಪಾಲಿಸೆನ್ನನು || 2 ||

ತುಂಗಾತೀರನಿವಾಸ ರಾಘವೇಂದ್ರ ಗುರು । 
ತುಂಗಮಹಿಮ ನಿರ್ದೋಷ ।
ಮಂಗಳಸಮೂಹಾರಿ ಗಂಗಾಪಿತನ ಕೂಡಿ ।
ತುಂಗಪೂಜೆಯಗೊಂಡ್ವರಂಗಳ ಬೀರುವ ॥
ತಿಂಗಳಾಸ್ಯನೆ ತೀರ್ಥಪಾದನೆ । 
ಭಂಗ ಬಗೆಯನು ಬಲ್ಲ ಮಹಾತ್ಮ।
ರಂಗ ಜಯೇಶವಿಠಲ ದೇವನ । 
ಸಂಗ ನೀಡುವ ಕೃಪೆಯ ಮಾಳ್ಪದು ॥ 3 ॥
*********

No comments:

Post a Comment