Friday 27 December 2019

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ ankita bheemesha krishna

ಎತ್ತಿರೇ ನವರತ್ನದಾರುತಿ ಕರ್ತೃರಂಗನ ರಾಣಿಗೆ||ಪ||

ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||ಅ.ಪ||

ಶುದ್ಧ ಸ್ನಾನವ ಮಾಡಿ ನದಿಯಲಿ ವಜ್ರಪೀಠದಿ ಕುಳಿಸಿರೇ|
ತಿದ್ದಿ ತಿಲಕವ ತೀಡಿದಂಥ ಮುದ್ದು ಮಂಗಳಗೌರಿಗೆ||1||

ಎರೆದು ಪೀತಾಂಬರವನುಡಿಸಿ ಸರ್ವಾಭರಣವನಿಡಿಸಿರೇ|
ಹರಳಿನೋಲೆ ಮೂಗುತಿ ಇಟ್ಟ ಮುದ್ದು ಮಹಾಲಕ್ಷ್ಮೀ ದೇವಿಗೆ||2||

ಅಚ್ಚಮಲ್ಲಿಗೆ ಲಕ್ಷ ಸಂಪಿಗೆ ಎತ್ತಿರೇ ನಿಮ್ಮ ಪಾದಕೆ|
ಉತ್ತಮೋತ್ತಮಲೋಲನಾದ ವಿಷ್ಣುವಿನ ಕಲ್ಯಾಣಿಗೆ||3||

ಹರಿಯ ವಂಚಿಸಿ ಕರವೀರದೊಳು ಭರದಿ ಸ್ಥಿರವಾಗಿರುವೊಳೇ|
ಪರಮಭಕ್ತರಿಗೆ ವರವ ಕೊಡುವ ನಿಗರ್ವಿಗೊಲಿಯುವ ದೇವಿಗೆ||4||

ಹುಟ್ಟು ಬಡವಿಯ ಕಷ್ಟ ಕಳೆದು ಕೊಟ್ಟಳರಸನ ಸಿರಿಯನು|
ಹೆತ್ತಕುವರನ ತೋರಿದಂಥ ಶುಕ್ರವಾರದ ಗೌರಿಗೆ||5||

ನಿಗಮವೇದ್ಯಳೇ ನಿನ್ನ ಮಹಿಮೆಯ ಬಗೆಬಗೆಯಿಂದಲಿ ಪೊಗಳುವೆ|
ತೆರೆದು ಭಾಗ್ಯವ ನೀಡುವಂಥ ಭೀಮೇಶಕೃಷ್ಣನ ಮಡದಿಗೆ||6|
********

No comments:

Post a Comment