Saturday 28 December 2019

ಶ್ರೀನಿವಾಸ ಕಲ್ಯಾಣ sri shreenivasa kalyana



ಶ್ರೀನಿವಾಸ ಕಲ್ಯಾಣ
ಸ್ತ್ರೀಯರೆಲ್ಲರು ಬನ್ನಿರೆ । ಶ್ರೀನಿವಾಸನ ಪಾಡಿರೇ
ಜ್ಞಾನಗುರುಗಳಿಗೊಂದಿಸಿ । ‏ ಮುಂದೆ ಕಥೆಯ ಪೇಳುವೆ ।।

ಗಂಗಾ ತೀರದಿ ಋಷಿಗಳು । ಅಂದು ಯಾಗವ ಮಾಡ್ಡರು
ಬಂದು ನಾರದ ನಿಂತುಕೊಂಡು । ಯಾರಿಗೆಂದು ಕೇಳಲು

ಅರಿತು ಬರಬೇಕು ಎಂದು । ಆ ಮುನಿಯು ತೆರಳಿದ
-ಭೃಗುಮುನೀಯು ತೆರಳಿದ
ನಂದಗೋಪನ ಮಗನ ಕಂದನ । ಮಂದಿರಕಾಗ ಬಂದನು

ವೇದಗಳನೆ ಓದುತಾ । ಹರಿಯನೂ ಕೊಂಡಾಡುತಾ
ಇರುವ ಬೊಮ್ಮನ ನೋಡಿದ । ಕೈಲಾಸಕ್ಕೆ ಬಂದನು

ಶಂಭುಕಂಠನು ಪಾರ್ವತೀಯೂ । ಕಲೆತಿರುವುದ ಕಂಡನು
ಸೃಷ್ಟಿಯೊಳಗೆ ನಿನ್ನ ಲಿಂಗ । ಶ್ರೇಷ್ಠವಾಗಲೆಂದನು

ವೈಕುಂಠಕ್ಕೆ ಬಂದನು । ವಾರಿಜಾಕ್ಷನ ಕಂಡನು
ಕೆಟ್ಟ ಕೋಪದಿಂದ ಒದ್ದರೆ । ಎಷ್ಟು ನೊಂದಿತೆಂದನು

ತಟ್ಟನೆ ಬಿಸಿನೀರಿನಿಂದ । ನೆಟ್ಟಗೆ ಪಾದ ತೊಳೆದನು
ಬಂದ ಕಾರ್ಯ ಆಯಿತೆಂದು । ಅಂದು ಮುನಿಯು ತೆರಳಿದ
ಬಂದು ನಿಂದು ಸಭೆಯೊಳಗೆ । ಇಂದಿರೇಶನ ಹೊಗಳಿದ

ಪತಿಯ ಕೂಡೆ ಕಲಹ ಮಾಡಿ । ಕೊಲ್ಹಾಪುರಕೆ ಹೋದಳು
ಸತಿಯು ಪೋಗೆ ಪತಿಯು ಹೊರಟು । ಗಿರಿಗೆ ಬಂದು ಸೇರಿದ

ಹುತ್ತದಲ್ಲೆ ಹತ್ತು ಸಾವಿರ ವರುಷ । ಗುಪ್ತವಾಗಿ ಇದ್ದನು
ಬ್ರಹ್ಮ ಧೇನುವಾದನು । ರುದ್ರ ವತ್ಸನಾದನು

ಧೇನು ಮುಂದೆ ಮಾಡಿಕೊಂಡು । ಗೋಪಿ ಹಿಂದೆ ಬಂದಳು
ಕೋಟಿ ಹೊನ್ನು ಬಾಳುವೋದು । ಕೊಡದ ಹಾಲು ಕರೆವುದು

ಪ್ರೀತಿಯಿಂದಲಿ ತನ್ನ ಮನೆಗೆ । ತಂದುಕೊಂಡನು ಚೋಳನು
ಒಂದು ದಿವಸ ಕಂದಗೆ ಹಾಲು । ಚೆಂದದಿಂದಲಿ ಕೊಡಲಿಲ್ಲ.

ಅಂದು ರಾಯನ ಮಡದಿ ಕೋಪಿಸಿ । ಬಂದು ಗೋಪನ ಹೊಡೆದಳು
ಧೇನು ಮುಂದೆ ಮಾಡಿಕೊಂಡು । ಗೋಪ ಹಿಂದೆ ನಡೆದನು

ಕಾಮಧೇನು ಕರೆದ ಹಾಲು । ಹರಿಯ ಶಿರಕೆ ಬಿದ್ದಿತು
ಇಷ್ಟು ಕಷ್ಟ ಬಂದಿತೆಂದು । ಪೆಟ್ಟು ಬಡಿಯೆ ಹೋದನು

ಕೃಷ್ಣ ತನ್ನ ಮನದಲ್ಯೋಚಿಸಿ । ಕೊಟ್ಟ ತನ್ನ ಶಿರವನು
ಏಳು ತಾಳೆಮರದ ಉದ್ದ । ಏಕವಾಗಿ ಹರಿಯಿತು

ರಕ್ತವನ್ನು ನೋಡಿ ಗೋಪ । ಮತ್ತೆ ಸ್ವರ್ಗಕ್ಕೇರಿದ
ಕಷ್ಟವನ್ನು ನೋಡಿ ಗೋವು । ಅಷ್ಟು ಬಂದ್-ಹೇಳಿತು

ತಟ್ಟನೆ ರಾಯ ಎದ್ದು ಗಿರಿಗೆ । ಬಂದು ಬೇಗ ಸೇರಿದ
ಏನು ಕಷ್ಟ ಇಲ್ಲಿ ಹೀಗೆ । ಯಾವ ಪಾಪಿ ಮಾಡಿದ

ಇಷ್ಟು ಕಷ್ಟ ಕೊಟ್ಟವಾಗೆ । ಭ್ರಷ್ಟಪಿಶಾಚಿಯಾಗೆಂದ
ಪೆಟ್ಟು ವೇದನೆ ತಾಳಲಾರದೆ । ಬೃಹಸ್ಪತೀಯ ಕರೆಸಿದ

ಅರುಣ ಉದಯದಲ್ಲೆದ್ದು । ಔಷಧಕ್ಕೆ ಪೋದನು
ಕ್ರೋಡರೂಪಿಯ ಕಂಡನು । ಕೂಡಿ ಮಾತನಾಡಿದನು

ಇರುವುದಕ್ಕೆ ಸ್ಥಳವು ಎನಗೆ । ಏರ್ಪಾಡಾಗಬೇಕೆಂದ
ನೂರು ಪಾದ ಭೂಮಿ ಕೊಟ್ಟರೆ । ಮೊದಲು ಪೂಜೆ ನಿಮಗೆಂದ

ಪಾಕ ಪಕ್ವ ಮಾಡುವುದಕ್ಕೆ । ಆಕೆ ಬಕುಳೆ ಬಂದಳು
ಭಾನುಕೋಟಿತೇಜನೀಗ । ಬೇಟೆಯಾಡ ಹೊರಟನು

ಮಂಡೆ ಬಾಚಿ ದೊಂಡೆ ಹಾಕಿ । ದುಂಡುಮಲ್ಲಿಗೆ ಮುಡಿದನು
ಹಾರ ಪದಕ ಕೊರಳಲ್ಹಾಕಿ । ಫಣೆಗೆ ತಿಲಕವಿಟ್ಟನು

ಅಂಗುಲಿಗೆ ಉಂಗುರ । ರಂಗಶ್ವಂಗಾರವಾದವು
ಪಟ್ಟೆನುಟ್ಟು ಕಚ್ಚೆ ಕಟ್ಟಿ । ಪೀತಾಂಬರವ ಹೊದ್ದನು

ಢಾಳು ಕತ್ತಿ ಉಡಿಯಲ್ ಸಿಕ್ಕಿ । ಜೋಡು ಕಾಲಲ್ಲಿ ಮೆಟ್ಟಿದ
ಕರದಿ ವೀಳ್ಯವನ್ನೆ ಪಿಡಿದು । ಕನ್ನಡಿಯ ನೋಡಿದ

ಕನಕಭೂಷಣವಾದ ತೊಡಿಗೆ । ಕಮಲನಾಭ ತೊಟ್ಟನು
ಕನಕಭೂಷಣವಾದ ಕುದುರೆ । ಕಮಲನಾಭ ಏರಿದ

ಕರಿಯ ಹಿಂದೆ ಹರಿಯು ಬರಲು । ಕಾಂತೆರೆಲ್ಲ ಕಂಡರು
ಯಾರು ಇಲ್ಲಿ ಬರುವರೆಂದು । ದೂರ ಪೋಗಿರೆಂದರು

ನಾರಿಯರಿರುವ ಸ್ಥಳಕೆ । ಯಾವ ಪುರುಷ ಬರುವನು
ಎಷ್ಟು ಹೇಳೆ ಕೇಳ ಕೃಷ್ಣ । ಕುದುರೆ ಮುಂದೆ ಬಿಟ್ಟನು

ಅಷ್ಟು ಮಂದೀರೆಲ್ಲ ಸೇರಿ । ಪೆಟ್ಟುಗಳನು ಹೊಡೆದರು
ಕಲ್ಲುಮಳೆಯ ಕರೆದರಾಗ । ಕುದುರೆ ಕೆಳಗೆ ಬಿದ್ದಿತು

ಕೇಶ ಬಿಚ್ಚಿ ವಾಸುದೇವ । ಶೇಷಗಿರಿಗೆ ಬಂದನು
ಪರಮಾನ್ನ ಮಾಡಿದ್ದೇನೆ । ಉಣ್ಣು ಬೇಗ ಎಂದಳು

ಅಮ್ಮ ಎನಗೆ ಅನ್ನ ಬೇಡ । ಎನ್ನ ಮಗನೆ ವೈರಿಯೇ
ಕಣ್ಣಿಲ್ಲಾದ ದೈವ ಅವಳ । ನಿರ್ಮಾಣವ ಮಾಡಿದ

ಯಾವ ದೇಶ ಯಾವೋಳಾಕೆ । ಎನಗೆ ಪೇಳು ಎಂದಳು
ನಾರಾಯಣನ ಪುರಕೆ ಪೋಗಿ । ರಾಮಕೃಷ್ಣರ ಪೂಜಿಸಿ

ಕುಂಜಮಣಿಯ ಕೊರಳಲ್ಹಾಕಿ । ಕೂಸಿನ್ ಕೊಂಕಳಲೆತ್ತಿದಾ
ಧರಣಿದೇವಿಗೆ ಕಣಿಯ ಹೇಳಿ । ಗಿರಿಗೆ ಬಂದು ಸೇರಿದ

ಕಾಂತೆರೆಲ್ಲ ಕೂಡಿಕೊಂಡು । ಆಗ ಬಕುಳೆ ಬಂದಳು
ಬನ್ನಿರೆಮ್ಮ ಸದನಕೆನುತ । ಬಹಳ ಮಾತನಾಡಿದರು

ತಂದೆತಾಯಿ ಬಂಧುಬಳಗ । ಹೊನ್ನು ಹಣ ಉಂಟೆಂದರು
ಇಷ್ಟು ಪರಿಯಲ್ಲಿದ್ದವಗೆ । ಕನ್ಯೆ ಯಾಕೆ ದೊರೆಕಲಿಲ್ಲ

ದೊಡ್ಡವಳಿಗೆ ಮಕ್ಕಳಿಲ್ಲ । ಮತ್ತೆ ಮದುವೆ ಮಾಡ್ವೆವು
ಬೃಹಸ್ಪತೀಯ ಕರೆಸಿದ । ಲಗ್ನಪತ್ರಿಕೆ ಬರೆಸಿದ (ಕಳುಹಿದ)

ಶುಕಾಚಾರ್ಯರ ಕರೆಸಿದ |ಮದುವೆ ಓಲೆ ಬರೆಸಿದ

ವಲ್ಲಭೆಯ ಕರೆವುದಕ್ಕೆ । ಕೊಲ್ಹಾಪುರಕೆ ಪೋದರು
ಗರುಡನ್ ಹೆಗಲನೇರಿಕೊಂಡು । ಬೇಗ ಹೊರಟುಬಂದರು

ಅಷ್ಟವರ್ಗವನ್ನು ಮಾಡಿ । ಇಷ್ಟದೇವರ ಪೂಜಿಸಿ
ಲಕ್ಷ್ಮೀಸಹಿತ ಆಕಾಶರಾಜನ । ಪಟ್ಟಣಕ್ಕೆ ಬಂದರು

ಕನಕಭೂಷಣವಾದ ತೊಡಿಗೆ । ಕಮಲನಾಥ ತೊಟ್ಟನು
ಕನಕಭೂಷಣವಾದ ಮಂಟಪ । ಕಮಲನಾಭ ಏರಿದ

ಕಮಲನಾಭಗೆ ಕಾಂತೆಮಣಿಯ । ಕನ್ಯದಾನವ ಮಾಡಿದ
ಕಮಲನಾಭ ಕಾಂತೆ ಕೈಗೆ । ಕಂಕಣವನ್ನೆ ಕಟ್ಟಿದ
ಶ್ರೀನಿವಾಸ ಪದ್ಮಾವತಿಗೆ । ಮಾಂಗಲ್ಯವಕಟ್ಟಿದ

ಶ್ರೀನಿವಾಸನ ಮದುವೆ ನೋಡೆ । ಸ್ಟೀಯರೆಲ್ಲರು ಬನ್ನಿರೇ
ಪದ್ಮಾವತಿಯ ಮದುವೆ ನೋಡೆ । ಮುದ್ದು ಬಾಲೆಯರ್ ಬನ್ನಿರೇ
ಶಂಕೆಯಿಲ್ಲದೆ ಹಣವ ಸುರಿದು । ವೆಂಕಟೇಶನ ಕಳುಹಿದ

ಲಕ್ಷ ತಪ್ಪು ಎನ್ನಲುಂಟು । ಪಕ್ಷಿವಾಹನ ಸಲಹೆನ್ನ
ಕೋಟಿ ತಪ್ಪು ಎನ್ನಲುಂಟು ಕುಸುಮನಾಭ ಸಲಹೆನ್ನ
ಶಂಕೆಯಿಲ್ಲದೆ ವರವ ಕೊಡುವ ವೆಂಕಟೇಶ ಸಲಹೆನ್ನ
ಭಕ್ತಿಯಿಂದಲಿ ಹೇಳ್ಕೇಳ್ದವರಿಗೆ । ಮುಕ್ತಿ ಕೊಡುವ ಹಯವದನ

ಜಯ ಜಯ ಶ್ರೀನಿವಾಸನಿಗೆ । ಜಯ ಜಯ ಪದ್ಮಾವತಿಗೆ
ಒಲಿದಂತಹ ಶ್ರೀಹರಿಗೆ । ನಿತ್ಯ ಶುಭಮಂಗಳ
ಶೇಷಾದ್ರಿಗಿರಿವಾಸ । ಶ್ರೀದೇವಿ ಅರಸಗೆ
ಕಲ್ಯಾಣಮೂರುತಿಗೆ । ನಿತ್ಯಜಯಮಂಗಳ||
***********

No comments:

Post a Comment