Thursday 17 October 2019

ಬಾ ಬಾ ವೇಂಕಟಾಚಲ ವಿಹಾರ ankita vijaya vittala

ಬಾ ಬಾ ಭಕುತರ ಹೃದಯ ಮಂದಿರ
ಬಾ ಬಾ ಜಗದೋದ್ಧಾರ ||pa||

ಬಾ ಬಾ ವೇಂಕಟಾಚಲ ವಿಹಾರ
ಬಾ ಬಾನೇಕಾವತಾರ ಧೀರ-ಶೂರ||a.pa||

ದಕ್ಷ ಕಮಲಾಕ್ಷ ರಾಕ್ಷಸ ಕುಲ ಶಿಕ್ಷ
ಲಕ್ಷ್ಮಣನಗ್ರಜ ಲಕ್ಷ್ಮೀವಕ್ಷ
ಪಕ್ಷಿವಾಹನ ಪೂರ್ಣಲಕ್ಷಣ ಸರ್ವೇಶ
ಮೋಕ್ಷದಾಯಕ ಪಾಂಡವ ಪಕ್ಷ
ಅಕ್ಷಯವಂತ ಸೂಕ್ಷ್ಮಾಂಬರ ಧರಾ-
ಧ್ಯಕ್ಷ ಪ್ರತ್ಯಕ್ಷದ ದೈವ
ಅಕ್ಷತನಾರೇರ ತಕ್ಷಣದಲಿ ತಂದ
ಅಕ್ಷರ ಪುರುಷ ಗೋವಿಂದ ||1||

ಜಾಂಬೂನಾದಾಂಬರ ಸಾಂಬಜನಕ-ನೀ
ಲಾಂಬುದ ವರ್ಣಸುಪೂರ್ಣ
ಸಾಂಬವಿನುತ ಸುಗುಣಾಂಬುಧಿ ನಾನಾ ವಿ
ಡಂಬನ ತೋರಿದ ಮಹಿಮ
ಕಾಂಬುವೆ ನಿನ್ನ ಚರಣಾಂಬುಜ ಮನದೊಳು
ಜಾಂಬುವಂತನ ಪರಿಪಾಲಾ ವಿ-
ಶ್ವಂಭರಂಬರಗ್ಗಣಿಯ ಪಡೆದ ವೃ-
ತ್ತುಂಬರೇಶಾಂಬುಧಿ ಶಾಯಿ ||2||

ತಾಳ ಜಾಗಟೆ ಮದ್ದಳೆ ದುಂದುಭಿ ಭೇರಿ
ಕಾಳೆ ಹೆಗ್ಗಾಳೆ ತಮ್ಮಟಿ ನಿ-
ಸ್ಸಾಳೆ ಪಟಹ ತಂಬೂರಿ ಪಣವ ಕಂಸಾಳೆ
ಕಂಬುಡಿಕ್ಕಿ ವಾದ್ಯ
ಸೂಳೈಸುತಲಿರೆ ಭಾಗವತರು ಸಂ
ಮೇಳದಿ ಕುಣಿದೊಲಿದಾಡೆ
ಸಾಲುಪಂಜಿನ ಗುಂಜಿ ಛತ್ರ ಚಾಮರ ಧ್ವಜ
ಢಾಲುಗಳು ಒಪ್ಪಿರಲು||3||

ಹಂಸವಾಹನ ಕ್ರತುಧ್ವಂಸಿ ಸುಮನಸೋ
ತ್ತಂಸ ಕೃಶಾನು ಪಾಪಿಗಳ
ಹಿಂಸೆಯ ಗೊಳಿಸುವ ಪಾಂಸರಕ್ಕಸಪಾಳಿ
ಕೌಂಶಿಕಾಪತಿಯು ಧನವ
ಅಂಶಮಾಲಿ ಸೋಮಕಂಶಿಕಮುನಿ ಪರಮ
ಹಂಸರು ಅಲ್ಲಲ್ಲಿ ನಿಂದು
ಸಂಶಯ ಮಾಡದೆ ಸಮ್ಮೊಗರಾಗಿಹರು
ಕಂಸಾರಿ ತ್ರಿಗುಣಾತೀಶ ||4||

ಮೂರು ನಾಮಂಗಳ ಧರಿಸಿದ ದಾಸರು
ವೀರ ಮಾರುತಿ ಮತದವರು
ಸಾರುತ್ತ ಬೊಮ್ಮಾದಿ ಸುರರುಗಳನ್ನು
ತಾರತಮ್ಯದಿಂದ ತಿಳಿದು
ಬಾರಿಬಾರಿಗೆ ನಿಮ್ಮ ಹಾರೈಸಿ ಆನಂದ
ವಾರಿಧಿಯಲಿ ಮಗ್ನರಾಗಿ
ತಾರರು ಮನಸಿಗೆ ಮುರಡು ದೇವತೆಗಳ
ಸಾರ ಹೃದಯರು ನಿಂದಿಹರು ||5||

ಅಂದು ಬಲೀಂದ್ರನ್ನ ದ್ವಾರದಿ ನೀನಿರೆ
ಮಂದಮತಿಯು ರಾವಣನು
ಬಂದು ಕೆಣಕೆ ನಗುತ ಮಹಾಲೀಲೆ
ಯಿಂದಲಿ ನೀನಾ ಖಳನ
ಒಂದು ಶತಯೋಜನ ತಡಮಾಡದಲೆ ನೀ
ಹಿಂದಕ್ಕೆ ಬೆರಳಲ್ಲಿ ಒಗೆದೆ
ಇಂದು ನಿನಗೆ ಈ ರಥವ ನಡೆಸುವುದು
ಅಂದವಾಗಿಹುದೇನೊ ದೇವ||6||

ಬಂಗಾರ ರಥದೊಳು ಶೃಂಗಾರವಾದ ಶ್ರೀ
ಮಂಗಳಾಂಗ ಕಳಿಂಗ
ಭಂಗ ನರಸಿಂಗÀ ಅಂಗಜ ಜನಕ ಸಾ-
ರಂಗ ರಥಾಂಗ ಪಾಣಿ
ಸಂಗ ನಿಸ್ಸಂಗ ಮಾತಂಗ ವಿಹಂಗ ಪ್ಲ-
ವಂಗ ನಾಯಕ ಪರಿಪಾಲ
ಸಂಗೀತ ಲೋಲ ಗೋಪಾಂಗನೆಯರ ಅಂತ-
ರಂಗ ಸಂತಾಪ ವಿದೂರ ||7||

ತಡಮಾಡಲಾಗದೊ ಪೊಡವೀಶ ನೀನಿಂದು
ತಡೆಯದಲೆ ಪೊರಟರೆ
ತಡೆವರಿನ್ನಾರೈಯ ವಡೆಯ ವೇದವೇದ್ಯ
ಕಡೆಗಣ್ಣಿನಿಂದ ನೋಡಿದಲೆ
ನಡೆವುದು ನುಡಿವುದು ಅಡಿಗಡಿಗೆ ನೀನು
ಬಿಡದೆ ಒಳಗೆ ಹೊರಗಿದ್ದು
ಸಡಗರ ದೈವವೆ ನುಡಿಯ ಲಾಲಿಸುವುದು
ವಡನೊಡನೆ ಪಾಲಿಸುತ್ತ||8||

ಹತ್ತವತಾರದ ಹರಿಯೆ ಘನಸಿರಿಯೆ
ಮತ್ತೊಬ್ಬರನು ಹೀಗೆ ಕರೆಯೆ
ಭೃತ್ಯರ ಸಂಗಡೋಡ್ಯಾಡುವ ದೊರೆಯೆ ಎ-
ನ್ಹತ್ತಿಲಿ ಆಡುವ ಮರಿಯೆ
ಚಿತ್ತದೊಲ್ಲಭ ನಮ್ಮ ವಿಜಯವಿಠ್ಠಲರೇಯ
ಎತ್ತನೋಡಲು ನಿನಗೆ ಸರಿಯೆ
ಅತ್ತಿತ್ತ ಪೋಗದೆ ಇತ್ತ ಬಾರೈಯ ಎ-
ನ್ಹತ್ತಿಲಿ ವೆಂಕಟದೊರೆಯ ||9||
******

No comments:

Post a Comment