Wednesday 16 October 2019

ಬಂದಿದೆ ದೂರು ಬರಿದೆ ಪಾಂಡವರಿಗೆ ankita neleyadikeshava

check kanaka dasa
ಬಂದಿದೆ ದೂರು ಬರಿದೆ ಪಾಂಡವರಿಗೆ
ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ||

ಮುನ್ನಿನ ವೈರದಿ ಕಡುಸ್ನೇಹವ ಮಾಡಿ
ಉನ್ನಂತಲೆತ್ತ ಪಗಡೆಯಾಡಿಸಿ
ತನ್ನ ಕುಹಕದಿಂದ ಕುರುಬಲವನು ಕೊಂದ
ಘನ್ನಘಾತುಕ ಶಕುನಿಯೋ? ಪಾಂಡವರೋ? ||೧||

ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು
ಧುರದಲಿ ಷಂಡನ ನೆಪದಿಂದಲಿ
ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು
ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨||

ಮಗನ ನೆವದಿ ಕಾಳಗವ ಬಿಸುಟು ಸುರ
ನಗರಿಗೆ ನಡೆದು ವೈರಾಗ್ಯದಿಂದ
ಜಗವರಿಯಲು ಕುರುವಂಶಕೆ ಕೇಡನು
ಬಗೆದು ಕೊಂದವ ದ್ರೋಣನೋ? ಪಾಂಡವರೋ? ||೩||

ತೊಟ್ಟ ಬಾಣವ ತೊಡಲೊಲ್ಲದೆ ಮಾತೆಗೆ
ಕೊಟ್ಟ ಭಾಷೆಗೆ ನಾಲ್ವರ ಕೊಲ್ಲದೆ
ನೆಟ್ಟನೆ ರಣಮುಖದಲಿ ತನ್ನ ಪ್ರಾಣವ
ಬಿಟ್ಟು ಕೊಂದವ ಕರ್ಣನೋ? ಪಾಂಡವರೋ? ||೪||

ಮಥಿನಿಸಿ ಸೂತತನವ ಮಾಡಿ ರಣದೊಳಗೆ
ಅತಿ ಹೀನಗಳೆಯುತ ರವಿಸುತನ
ರಥದಿಂದಿಳಿದು ಪೋಗಿ ಕೌರವರ ಬಲವನು
ಹತ ಮಾಡಿದವ ಶಲ್ಯನೋ? ಪಾಂಡವರೋ ? ||೫||

ಜಲದೊಳು ಮುಳುಗಿ ತಪವ ಮಾಡಿ ಬಲವನು
ಛಲದಿಂದೆಬ್ಬಿಸಿ ಕಾದುವೆನೆಂದವ
ಕಲಿ ಭೀಮಸೇನನ ನುಡಿ ಕೇಳಿ ಹೊರಹೊರಟು
ಕುಲವ ಕೊಂದವ ಕೌರವನೋ? ಪಾಂಡವರೋ? ||೫||

ಕೌರವ ಪಾಂಡವರಿಗೆ ಭೇದವ ಪುಟ್ಟಿಸಿ
ಗೌಜೊಡ್ಡಿ ಕುರುಕ್ಷೇತ್ರದಿ ಕಾದಿಸಿ
ಸಂಶಯವಿಲ್ಲದೆ ಕುರುಬಲವನು ಕೊಂದ
ಹಿಂಸಕನು ಆದಿಕೇಶವನೋ? ಪಾಂಡವರೋ ||೬||
***********

No comments:

Post a Comment