Monday 2 August 2021

ಇಂದಿರಾರಾಧ್ಯನೆ ಬಂದು ನಿಲ್ಲೊ ankita uragadrivasa vittala

ಇಂದಿರಾರಾಧ್ಯನೆ ಬಂದು ನಿಲ್ಲೊ ಪ


ಇಂದೆನ್ನ ಸಲಹೊ ಮಂದನಾನೊಂದನರಿಯೆ ಏ-

ನೆಂದು ಕರೆಯಲೋ ಗೊವಿಂದ ಅ.ಪ


ಜಲದೊಳಾಡುವ-ಕಲ್ಲಹೊರುವ

ಎಲ್ಲಕಾಡಿನೊಳಾಡುವ ಭಳಿರೆ ಎರಡಂಗವ ತಳೆವ

ಇಳೆಯನಳೆಯುವ ಭಾರ್ಗವ ಖಳಕುಲ

ವನಳಿವಗೋವನೆ ಕಾಯ್ದ

ಲಲನೆಯರವ್ರತವನಳಿವ ಅಶ್ವವ ನೇರಿ

ಮರೆವ ನಿನ್ನಯ ರೂಪವಾ

ಸಲಿಲ ಹೊಕ್ಕು ಅಸುರನ ಸಂಹರಿಸಿ

ಕಲಕಿಶರಧಿಯ ಸುಧೆಯನು ತರಿಸಿ

ನೆಲಗಳ್ಳನ ಮದವನೆ ಮರ್ದಿಸಿ

ಚೆಲುವಚೆಳ್ಳುಗುರಿನಿಂದುದರವ ಛೇದಿಸಿ

ಸುಲಭದಿಂದ ಶುಕ್ರನ ಕಣ್ಮರಿಸಿ

ಬಲುಕೊಬ್ಬಿದ ಕ್ಷತ್ರಿಯರನೊರೆಸಿ

ಶಿಲೆಯ ಮೆಟ್ಟಿ ಮುನಿಸತಿಯರನುದ್ಧರಿಸಿ

ಲೀಲೆಯಿಂದ ವ್ರಜನಾರಿಯರೊಲಿಸಿ

ಸಲೆದಿಗಂಬರರೂಪವ ಧರಿಸಿ

ಇಳೆಯೊಳು ರಾವುತನಾಗಿ ಮೆರೆವ-ನಿನ್ನಯ

ರೂಪವ ಬಲ್ಲವರಾರೊ ಮಾಧವ 1

ಜಲದೊಳು ನಿಂದು ಕಣ್ಣಬಿಡುವ ಶೈಲವ ತಳೆವಾ

ಕಲಕೀ ಮಣ್ಣ ಮೆಲುವ ಕಲ್ಲಕಂಭವ ಒಡೆವಾ

ಬಲಿಯನೆ ಬೇಡುವ ಪರಶುವ ತೊಳೆದು ವನವನಗಳ ಚರಿಸುವ

ಬಾಲೆಯರನಾಳ್ವ ಎಲ್ಲನಾಚಿಕೆಯ ಬಿಡುವ

ಸಲ್ಲುವಹಯವೇರಿ ಮೆರೆವಾ ನಿನ್ನಯ ರೂಪವಾ

ಎಲ್ಲವೇದವನುದ್ಧರಿಸಿ ವಾರಿಧಿಯಲಿ

ತಳೆದು ಅಮೃತಮಥನಕೆ ಶಿಲೆಯ

ಝಲಿಸಿ ನಿಲಸಿದೆ ನಿಜಕೆ ಧರಣಿಯ

ಬಲ್ಲಿದ ಬಲಿಯ ಬಂಧಿಸಿ ಭಕ್ತಿಯ

ಸಲ್ಲಿಸಿದೆ ಪಿತ ಪೇಳ್ದ ಆಜ್ಞೆಯ

ಬಿಲ್ಲನೆತ್ತಿ ವರಿಸಿದೆ ಸೀತೆಯ

ಮಲ್ಲರ ಮಡುಹಿ ತೋರಿದೆ ಚರಿಯ

ಜಳ್ಳುಮಾಡಿತೋರ್ದೆ ಧರ್ಮಕೆ ಮಾಯ

ಹುಲ್ಲುಣಿಸುವ ಹಯವೇರಿ ಮೆರೆದ ಶ್ರೀ

ವಲ್ಲಭ ನಿನ್ನಯ ರೂಪವ ಸೊಲ್ಲಿಪರಾರೋ ಶ್ರೀಧರ 2

ನಿಗಮತಂದಿತ್ತೆ ನಗವಾನೆ ನೆಗವಾ

ಮೊಗದೊಳು ಭೂಮಿಯ ಬಗೆವಾ ಉಗುರಿಂದುದರವ ಸೀಳ್ವ

ತ್ಯಾಗಿಯನ್ಯಾಚಿಸುವ ಭೃಗುವಿಗೆ ಮುದವ ತೋರ್ವ

ಸಾಗರಕೆ ಸೇತುಕಟ್ಟುವ ನೆನೆದಮೃತವ ಮೆಲುವ

ನಿಗಮ ಮೋಹಿಸಿ ತೋರ್ವ ಜಗದಿ ಕಲ್ಕಿ

ಎಂದೆನಿಸಿ ಮೆರೆವ ನಿನ್ನಯ ರೂಪವಾ

ಪೊಗಲಳವೇ ಭೂಧವ

ನಿಗಮಕಾಗಿ ನೀ ತಮನ ಮರ್ದಿಸಿ

ನಗವ ಬೆನ್ನಲಿ ಪೊತ್ತು ಸುಧೆಯನು ಸಾಧಿಸಿ

ಹಗೆಯ ಹಿರಣ್ಯನ ಅಸುವನೆ ಹರಿಸಿ

ಮಗುವಿನ ಭಕ್ತಿಗೆ ವ್ಯಾಪ್ತಿಯ ತೋರಿಸಿ

ಬಾಗಿಲ ಕಾಯ್ದು ನೀ ಬಲಿಯ ರಕ್ಷಿಸಿ

ಆ ಗರ್ವಿಸಿದರಸರ ಪರಶುವಿಂದ ವರೆಸಿ

ಯಾಗರಕ್ಷಣೆಗೆ ನೀ ರಕ್ಷಕನೆನಿಸಿ

ನೀಗಲು ಕುರುಕುಲ ಕಲಹವೆಬ್ಬಿಸಿ

ಆಗಮ ಶಾಸ್ತ್ರಕೆ ಮಾಯವ ಕಲ್ಪಿಸಿ

ಬೇಗ ಬಂದು ಹಯವೇರಿ ಮೆರೆವ-

ಶ್ರೀ ವೆಂಕಟೇಶ ನಿನ್ನಯ ರೂಪವ

ಬೇಗದಿ ತೋರೋ ಶ್ರೀಪಾದವಾ 3

****


No comments:

Post a Comment