Monday 2 August 2021

ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ ಗುರು ರಾಘವೇಂದ್ರಾರ್ಯನೇ ankita gopalakrishna vittala

ಪಾರುಗಾಣಿಸೊ ಎನ್ನ ಪಾವನಕಾಯ ಶ್ರೀ

ಗುರು ರಾಘವೇಂದ್ರಾರ್ಯನೇ ಪ.


ಶ್ರೀ ರಮಾಪತಿ ಗುಣವ ನೀ ಮನದೊಳು ತಿಳಿಸಿ

ಶ್ರೀ ರಾಮ ನಾಮ ನುಡಿ ಸೋ | ಭವ ಬಂಧ ಬಿಡಿಸೋ ಅ.ಪ.

ಮಿಂಚಿನಂತಿಹ ಎನ್ನ ಚಂಚಲ ಮನದಲ್ಲಿ

ಸಂಚಿತನೆ ಎನೆ ನೆಲಸೋ

ಸಂಚಿತಾಗಮಿಗಳು ಕೊಂಚ ಉಳಿಯದ ತೆರದಿ

ಪಂಚ ಭೇದಾರ್ಥ ತಿಳಿಸೊ

ಪಂಚವಕ್ತ್ರನ ತಾತ ಮಿಂಚಿನಂದದಿ ಪೊಳೆವೊ

ಹಂಚಿಕೆಯ ಎನಗೆ ತೋರೋ | ಮನಕ್ಹರುಷ ಬೀರೋ 1

ಶ್ರೀ ನರಹರಿ ಕೃಷ್ಣ ರಾಮ ವ್ಯಾಸರ ಪದವ

ನೀ ನಿರ್ಮಲದಲಿ ನೆನೆವೆ

ಮಾನನಿಧಿ ಮುರಹರಿಯ ಧಾಮತ್ರಯಗಳ ಮಾರ್ಗ

ಕಾಮಿಸಿದ ಭಕ್ತಗೀವೆ

ನಾನಧಮೆ ನಿನ್ನಡಿಗೆ ಬಾಗಿ ಭಜಿಸುವೆ ಗುರುವೆ

ನೀನಿತ್ತ ನೋಡಿ ಪೊರೆಯೊ | ನೀ ದಯವ ಗರೆಯೊ 2

ತರಳತನದಲಿ ಶ್ರೀ ನರಹರಿಯ ಭಜಿಸುತ್ತ

ಉರುತರದಿ ಭಾದೆ ಸಹಿಸಿ

ಹರಿಯು ಸರ್ವತ್ರ ವ್ಯಾಪಕನೆಂಬೊ ಮಹಿಮೆಯ

ಉರ್ವಿಯೊಳಗೆಲ್ಲ ನೆಲಸಿ

ವರಯತಿ ರೂಪದಲಿ ಸಿರಿ ಕೃಷ್ಣನಾ ಭಜಿಸಿ

ಮರುತ ಮತವನೆ ಸ್ಥಾಪಿಸಿ | ಗುರುರಾಯನೆನಸಿ 3

ತುಂಗ ತೀರದಿ ನಿಂದು ಮಂಗಳರೂಪದಲಿ

ಪಂಗು ಬಧಿರರ ಸಲಹುತ

ಸಂಗೀತ ಪ್ರಿಯನೆನಿಸಿ ಶೃಂಗಾರರಾಮನ

ಮಂಗಳರೂಪ ಭಜಿಸಿ

ಹಿಂಗದೇ ಸುಜನರಿಗೆ ವರವ ಕೊಡುವೊ ಬಿರುದು

ರಂಗನಾ ಪದದೊಲುಮೆಯೋ | ನಿನ್ನಯ ಮಹಿಮೆಯೋ 4

ಗೋಪಾಲಕೃಷ್ಣವಿಠ್ಠಲನ ಪರಿಪರಿಯಿಂದ

ಆ ಪಾದ ಮೌಳಿ ನೋಳ್ಪೆ

ಶ್ರೀ ಪತಿಯ ತೋರೆನಗೆ ಪಾಪ ಕಲುಷವ ಕಳದು

ತಾಪಪಡಲಾರೆ ಭವದಿ

ಕಾಪಾಡುವವರಿಲ್ಲ ನೀ ಕೃಪಾನಿಧಿಯೆಂದು

ಈ ಪರಿ ಕೇಳ್ದೆ ಗುರುವೆ | ಭಕ್ತರ ಕಲ್ಪ ತರುವೆ5

****


No comments:

Post a Comment