ರಾಗ - : ತಾಳ -
ಶ್ರೀ ಯದುವರಕುಲತೋಯದಿ ಹಿಮಕರಾಶ್ರಿತಜನ ಮಂದಾರ
ಮಾಯಾಪೂತನೀ ಹಾರ ವೇದೋದ್ಧಾರ ಮಂದರಶೈಲಧರ ll ಪ ll
ಗಂಗೋದ್ಭವ ಬಲಿ ವ್ಯಾಸ ಪರಾಶರ ಪುಂಗವನುತ ಚರಣ
ಮಂಗಳಾಂಗ ಕುಂತಿಸುತ ಪಾಲನ ಮೌನಿ ಹೃದಯ ಸದನ
ತುಂಗ ಚತುರ್ಭುಜ ಶಂಖಚಕ್ರಧರ ದನುಜವಂಶದಹನ
ಅಂಗಜಜನಕ ಕಾಳಿಂಗಗರ್ವಹರ ಅಂಬರೀಶ ಕರುಣ ll 1 ll
ಭೂಸುರಪತ್ನಿ ವಿಭೂಷಣಧರ ಕಂಸಾಸುರ ಮುರಮಥನ
ವಾಸವಾದಿ ಕಮಲಾಸನಪೂಜಿತ ವೈನತೇಯಗಮನ
ಶ್ರೀ ಶುಕ ಶೌನಕ ಸನಕ ಸನಂದನಸೇವಿತ ಹಯವದನ
ದಾಸಕಲುಷ ವಿನಾಶ ತ್ರಿಭುವನಾಧೀಶ ಶೇಷಶಯನ ll 2 ll
ಶರಣಾಗತಪೋಷಣ ಮೃದುಭಾಷಣ ಶಕಟಾಸುರಹರಣ
ಕರಿವರರಿಪುಹರ ಕನಕಾಂಬರಧರ ಶರನಿಧಿ ಮದಹರಣ
ನರಹರಿ ವೇಲಾಪುರಿ ಕೇಶವ ಶ್ರೀಧರ ಕೌಸ್ತುಭಾಭರಣ
ಕರುಣಾಸಾಗರ ಶ್ರೀ ಗೋಪಾಲವಿಟ್ಠಲ ಕಮಲಾಚಲ ರಮಣ ll 3 ll
***
ಅರ್ಥವಿವರಣೆ :-
ಶ್ರೀಯದುಕುಲ .... ಮಂದಾರ=ಮಂಗಳಕರವಾದ ಯದುಕುಲವೆಂಬ ಸಮುದ್ರಕ್ಕೆ (ತೋಯದಿ) ಚಂದ್ರಸದೃಶನಾಗಿರುವ (ಹಿಮಕರ) ಮತ್ತು ಮೊರೆಹೊಕ್ಕ ಜನರಿಗೆ ಕಲ್ಪವೃಕ್ಷ ಸದೃಶನಾಗಿರುವ (ಮಂದಾರ). ಮಾಯಾಪೂತನೀಹಾರ=ಮಾಯಾವಿಯಾದ (ಸುಂದರ ಸ್ತ್ರೀವೇಷದಿಂದ ಗೋಕುಲಕ್ಕೆ ಬಂದ) ಪೂತನಿಯ ಅಸುವನ್ನು ಹೀರಿದ ಶ್ರೀಕೃಷ್ಣ.
ವೇದೋದ್ಧಾರ=ಮತ್ಸ್ಯರೂಪದಿಂದ ವೇದಗಳನ್ನು ರಕ್ಷಿಸಿದ, ಮಂದರ ಶೈಲಧರ=ಮಂದರ ಗಿರಿಯನ್ನೆತ್ತಿದ ಕೂರ್ಮರೂಪಿ ಶ್ರೀಹರಿ.
ಗಂಗೋದ್ಭವ=ಗಂಗಾಜನಕನಾದ ತ್ರಿವಿಕ್ರಮ. ಪರಾಶರ=ವ್ಯಾಸರ ತಂದೆ. ಅಂಗಜಜನಕ=ಮನ್ಮಥನ ತಂದೆ. (ಪ್ರದ್ಯುಮ್ನನ ಜನಕ ಶ್ರೀಕೃಷ್ಣ) ಅಂಬರೀಶ ಕರುಣ=ಅಂಬರೀಶನ ಮೇಲೆ ಕಾರುಣ್ಯ ತೋರಿಸಿದ ಶ್ರೀಹರಿ. (ಅಂಬರೀಶ ವರದ)
ಭೂಸುರಪತ್ನಿ ವಿಭೂಷಣ ಧರ=ತನ್ನ ಗುರುಗಳಾದ ಸಾಂದೀಪನ (ಭೂಸುರ) ಪತ್ನಿ ಅಂದರೆ, ಗುರು ಪತ್ನಿಯ ಪುತ್ರನನ್ನು (ವಿಭೂಷಣ-ಕುಲ ಭೂಷಣನಾದ ಮಗ) ನ ಬದುಕಿಸಿ ತಂಡ ಶ್ರೀಕೃಷ್ಣ. ವಾಸವಾದಿ ಕಮಲಾಸನ ಪೂಜಿತ=ಇಂದ್ರನೇ ಮೊದಲಾಗಿ ಸಮಸ್ತ ದೇವತಾ ವರ್ಗ ಮತ್ತು ಬ್ರಹ್ಮನಿಂದ ಪೂಜಿತನಾದ ದಾಸರ ಕಲುಷ ವಿನಾಶ=ದಾಸಜನರ ದೋಷಗಳನ್ನು ಕಳೆಯುವವನು. ಕರಿವರರಿಪುಹರ=ಗಜರಾಜನನ್ನು ಮಡುವಿನಲ್ಲಿ ಹಿಡಿದು ಮೊಸಳೆಯನ್ನು ತನ್ನ ಚಕ್ರದಿಂದ ಸೀಳಿದ.
***
No comments:
Post a Comment