Saturday, 13 March 2021

ಶ್ರೀಯದುವರಕುಲತೋಯದಿ ಹಿಮಕರಾಶ್ರಿತಜನ ankita gopala vittala

 ರಾಗ - : ತಾಳ -


ಶ್ರೀ ಯದುವರಕುಲತೋಯದಿ ಹಿಮಕರಾಶ್ರಿತಜನ ಮಂದಾರ

ಮಾಯಾಪೂತನೀ ಹಾರ ವೇದೋದ್ಧಾರ ಮಂದರಶೈಲಧರ ll ಪ ll


ಗಂಗೋದ್ಭವ ಬಲಿ ವ್ಯಾಸ ಪರಾಶರ ಪುಂಗವನುತ ಚರಣ

ಮಂಗಳಾಂಗ ಕುಂತಿಸುತ ಪಾಲನ ಮೌನಿ ಹೃದಯ ಸದನ

ತುಂಗ ಚತುರ್ಭುಜ ಶಂಖಚಕ್ರಧರ ದನುಜವಂಶದಹನ

ಅಂಗಜಜನಕ ಕಾಳಿಂಗಗರ್ವಹರ ಅಂಬರೀಶ ಕರುಣ ll 1 ll


ಭೂಸುರಪತ್ನಿ ವಿಭೂಷಣಧರ ಕಂಸಾಸುರ ಮುರಮಥನ

ವಾಸವಾದಿ ಕಮಲಾಸನಪೂಜಿತ ವೈನತೇಯಗಮನ

ಶ್ರೀ ಶುಕ ಶೌನಕ ಸನಕ ಸನಂದನಸೇವಿತ ಹಯವದನ

ದಾಸಕಲುಷ ವಿನಾಶ ತ್ರಿಭುವನಾಧೀಶ ಶೇಷಶಯನ ll 2 ll


ಶರಣಾಗತಪೋಷಣ ಮೃದುಭಾಷಣ ಶಕಟಾಸುರಹರಣ

ಕರಿವರರಿಪುಹರ ಕನಕಾಂಬರಧರ ಶರನಿಧಿ ಮದಹರಣ

ನರಹರಿ ವೇಲಾಪುರಿ ಕೇಶವ ಶ್ರೀಧರ ಕೌಸ್ತುಭಾಭರಣ

ಕರುಣಾಸಾಗರ ಶ್ರೀ ಗೋಪಾಲವಿಟ್ಠಲ ಕಮಲಾಚಲ ರಮಣ ll 3 ll

***

ಅರ್ಥವಿವರಣೆ :-


ಶ್ರೀಯದುಕುಲ .... ಮಂದಾರ=ಮಂಗಳಕರವಾದ ಯದುಕುಲವೆಂಬ ಸಮುದ್ರಕ್ಕೆ (ತೋಯದಿ) ಚಂದ್ರಸದೃಶನಾಗಿರುವ (ಹಿಮಕರ) ಮತ್ತು ಮೊರೆಹೊಕ್ಕ ಜನರಿಗೆ ಕಲ್ಪವೃಕ್ಷ ಸದೃಶನಾಗಿರುವ (ಮಂದಾರ).  ಮಾಯಾಪೂತನೀಹಾರ=ಮಾಯಾವಿಯಾದ (ಸುಂದರ ಸ್ತ್ರೀವೇಷದಿಂದ ಗೋಕುಲಕ್ಕೆ ಬಂದ) ಪೂತನಿಯ ಅಸುವನ್ನು ಹೀರಿದ ಶ್ರೀಕೃಷ್ಣ.


ವೇದೋದ್ಧಾರ=ಮತ್ಸ್ಯರೂಪದಿಂದ ವೇದಗಳನ್ನು ರಕ್ಷಿಸಿದ, ಮಂದರ ಶೈಲಧರ=ಮಂದರ ಗಿರಿಯನ್ನೆತ್ತಿದ ಕೂರ್ಮರೂಪಿ ಶ್ರೀಹರಿ.


ಗಂಗೋದ್ಭವ=ಗಂಗಾಜನಕನಾದ ತ್ರಿವಿಕ್ರಮ.  ಪರಾಶರ=ವ್ಯಾಸರ ತಂದೆ.  ಅಂಗಜಜನಕ=ಮನ್ಮಥನ ತಂದೆ.  (ಪ್ರದ್ಯುಮ್ನನ ಜನಕ ಶ್ರೀಕೃಷ್ಣ) ಅಂಬರೀಶ ಕರುಣ=ಅಂಬರೀಶನ ಮೇಲೆ ಕಾರುಣ್ಯ ತೋರಿಸಿದ ಶ್ರೀಹರಿ. (ಅಂಬರೀಶ ವರದ)


ಭೂಸುರಪತ್ನಿ ವಿಭೂಷಣ ಧರ=ತನ್ನ ಗುರುಗಳಾದ ಸಾಂದೀಪನ (ಭೂಸುರ) ಪತ್ನಿ ಅಂದರೆ, ಗುರು ಪತ್ನಿಯ ಪುತ್ರನನ್ನು (ವಿಭೂಷಣ-ಕುಲ ಭೂಷಣನಾದ ಮಗ) ನ ಬದುಕಿಸಿ ತಂಡ ಶ್ರೀಕೃಷ್ಣ.  ವಾಸವಾದಿ ಕಮಲಾಸನ ಪೂಜಿತ=ಇಂದ್ರನೇ ಮೊದಲಾಗಿ ಸಮಸ್ತ ದೇವತಾ ವರ್ಗ ಮತ್ತು ಬ್ರಹ್ಮನಿಂದ ಪೂಜಿತನಾದ ದಾಸರ ಕಲುಷ ವಿನಾಶ=ದಾಸಜನರ ದೋಷಗಳನ್ನು ಕಳೆಯುವವನು.  ಕರಿವರರಿಪುಹರ=ಗಜರಾಜನನ್ನು ಮಡುವಿನಲ್ಲಿ ಹಿಡಿದು ಮೊಸಳೆಯನ್ನು ತನ್ನ ಚಕ್ರದಿಂದ ಸೀಳಿದ.

***


No comments:

Post a Comment