Friday 6 December 2019

ಜಯ ಮಂಗಳಂ ನಿತ್ಯ ಶುಭ ಮಂಗಳಂ ಆಲನಾರಾಯಣಗೆ purandara vittala

ರಾಗ ಭೈರವಿ ಛಾಪುತಾಳ

ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ||

ಆಲನಾರಾಯಣಗೆ ಲಕ್ಷ್ಮೀಅರಸಗೆ
ಕ್ಷೀರಸಾಗರದಲ್ಲಿ ನೆಲಸಿಹನಿಗೆ
ಆಲದೆಲೆಯಲಿ ಮಲಗಿ ಲೋಲನಾಗಿದ್ದಂಥ
ಸಾಕ್ಷಾತು ಪತಿಯ ವೆಂಕಟರಮಣಗೆ ||

ಗೋಕುಲದಲಿ ಹುಟ್ಟಿದವಗೆ ಗೋವುಗಳ ಕಾಯ್ದವಗೆ
ಗೋಪಾಲ ಶ್ರೀಕೃಷ್ಣ ಎನಿಸಿಹಗೆ
ಹದಿನಾಲ್ಕು ಲೋಕ ಬಾಯಲಿ ತೋರಿದಾತಗೆ
ಸಾಕ್ಷಾತು ಪತಿಯ ವೆಂಕಟರಮಣಗೆ ||

ದಶರಥರಾಮನಿಗೆ ಅಸುರ ಸಂಹಾರಿಗೆ
ಹೆಸರು ಸೀತಾಪತಿ ಎನಿಸಿಹಗೆ
ಕುಶಲದಲಿ ಸೇತುವೆನು ಕಟ್ಟಿ ಮೆರೆದಾತನಿಗೆ
ಸಾಕ್ಷಾತು ಪತಿಯ ವೆಂಕಟರಮಣಗೆ ||

ಶುಕ್ರವಾರದ ಪೂಜೆ ಪುನುಗಾಭಿಷೇಕದಾ
ಸ್ವಾಮಿಪುಷ್ಕರಿಣಿಲಿ ಸ್ಬಾನವನೆ ಮಾಡಿ
ಚಂದದಲಿ ತೀರ್ಥಪ್ರಸಾದ ಕಾಣಿಕೆಯಿತ್ತು
ಸುತ್ತಲು ಗರುಡ ಕಂಭದ ಜ್ಯೋತಿಯ ||

ಗುತ್ತಿ ಗೊಂದಿಪುರ ಪುಟ್ಟಮಾಲಾದೇಶ
ಇಕ್ಕೇರಿ ಶೃಂಗೇರಿ ಉಭಯಪುರ
ಒಪ್ಪುವ ಚೋಳಮಂದಲ ಶ್ರೀಮಂಡಲ
ಉಚ್ಚಾಹ ಬಂದ ಶ್ರೀವೆಂಕಟರಮಣ ||

ವಿಜಯನಗರ ಪಿಲುಪಕ್ಷಿಯಾನೆಗೊಂದಿ
ಹರಿಹರ ವೈಲಾರ ಉಮಯಾಪುರ
*ಗಜಗ ಲಕ್ಷ್ಮೀಸರ ಹೊಸಭಾನು ಹೊಸಪೇಟೆ
ಉಡುಗರೆ ಬಂದ ವೆಂಕಟರಮಣಗೆ ||

ತೆಲುಗ ತಿಗಳ ಮಲೆಯಾಳ ಪಾಂಡವದೇಶ
**ಗವುಳಿ ಗಜ್ಜಾಳಿ ಕರ್ಣಾಟ ದೇಶ
ಉಡುಪಿ ಕಲ್ಲೂರು ಕೃಷ್ಣವೇಣಿ ಶ್ರೀರಂಗ
ಮುಡುಪುಗಳು ಬಂದ ವೆಂಕಟರಮಣಗೆ ||

ತೊಟ್ಟಿಚಕ್ರದ ಕಪಿಲತೀರ್ಥಸ್ನಾನವ ಮಾಡಿ
ಪಾಪವಿನಾಶಿನಿಯಲ್ಲಿ ಪಾಪವನೆ ಕಳೆದು
ಕೋಟಿದೇವಿಗೆ ಕೋಟಿಪುಷ್ಪಗಳ ಸಮರ್ಪಿಸಿ
ಸಹಸ್ರ ನೈವೇದ್ಯ ವೆಂಕಟರಮಣಗೆ ||

ಕೊಟ್ಟರೆ ವರಗಳನು ತಪ್ಪಿಲ್ಲವೆನುತಲೆ
ಬೆಟ್ಟದ ಮೇಲೆ ತಾ ನೆಲಸಿಹಗೆ
ಥಟ್ಟನೆ ತಿರುಪತಿ ಮೇಲೆ ನೆಲಸಿದ
ಬೆಟ್ಟದ ಒಡೆಯ ಪುರಂದರವಿಠಲಗೆ ||

* ಗಜಗ = ಗದಗ , ಲಕ್ಷ್ಮೀಸರ= ಲಕ್ಷ್ಮೇಶ್ವರ 
** ಗವುಳಿ= ಗೌಡ ದೇಶ
*********

No comments:

Post a Comment