Friday 27 December 2019

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಭೈರವಿ ಝಂಪೆತಾಳ

ಏನು ಸುಕೃತದ ಫಲವೊ ಶ್ರೀನಿವಾಸನೆ ಹೇಳು
ಹಾನಿಯಾಗಿಯೆ ಅವಮಾನ ತೋರುತಿದೆ ||ಪ||

ವಾಸುದೇವನೆ ಎನ್ನ ಈಸುದಿನ ಪರಿಯಂತ
ಬೇಸರಿಲ್ಲದೆ ಕಾಯ್ದೆ ಲೇಸ ಕರುಣಿಸಿದೆ
ಈಸಾಡಿದೆನು ನಾನು ಈ ಗೃಹದೊಳೀಗೇನು
ದಾಸಿನವು ನಿನಗಾಯಿತು ಮೋಸ ಯೋಚಿಪರೆ ||೧||

ಹಗಲುಗತ್ತಲೆಯಾಗಿ ಮೊಗವು ಕಾಣದೆ ಎನಗೆ
ಜಗದುದರ ನಿನ್ನಾಣೆ ನಗೆಯಾಯ್ತು ಜಗಕೆ
ಹಗೆಯ ಮಧ್ಯದಿ ಸಿಲುಕಿ ಮೃಗವು ಬಾಯ್ಬಿಟ್ಟಂತೆ
ಮಿಗ ಕ್ಲೇಶಬಟ್ಟು ನರಮೃಗವು ತಾನಾದೆ ||೨||

ಆರು ಹಿತವರು ಇಲ್ಲ ಧಾರುಣಿಯ ಬಲವಿಲ್ಲ
ಪಾರಾಗಿ ನಾಚಿಕೆಯು ಬೇರೂರಿತು
ಘೋರ ಆಡವಿಯ ಒಳಗೆ ಗಾರುಗತ್ತಲೆ ಸುತ್ತಿ
ಮಾರಿದೆಯ ಚೋರರಿಗೆ ದಾರಿಗಾಣಿಸದೆ ||೩||

ದೊರೆಯು ಮನ್ನಿಸಿ ಕೊಡಲು ನೆರೆಹೊರೆಯ ಕರಕರೆಯು
ಹರದಿಯೊಳು ನಂಬಿಗೆಯು ಕಿರಿದಾಯಿತು
ನೆರವಾಗಿ ತೋರುತಿದೆ ಬರಿಯ ವೃಕ್ಷದ ತೆರದಿ
ಮರುಳು ಕಣ್ಣಿಗೆ ಇರುವೆ ಕರಿಯ ತೆರನಂತೆ ||೪||

ಇನು ಬಂಧಿಸಬೇಡ ಎನ್ನಿಂದ ಅಳವಲ್ಲ
ಬನ್ನಬಡುವುದು ಎಲ್ಲ ನಿನ್ನ ಮನಕರುಹು
ಮುನ್ನ ಮಾಡಿದ ಕರ್ಮ ಬೆನ್ನ ಬಿಡುವಂದದಲಿ
ಪನ್ನಗಾದ್ರಿನಿವಾಸ ಪಾಲಿಸೈ ಲೇಸ ||೫||

ದಾಸ ಬಳಲಿದನೆಂಬ ಹೇಸಿಕೆಯ ಮಾತುಗಳ
ಕಾಸ ಕೊಟ್ಟೇಕೆ ನಿರಾಸೆ ಮಾಡುವಿಯೊ
ಬೇಸರಾಗದೆ ಪಂಥವಾಸಿಯಿಲ್ಲವೆ ನಿನಗೆ
ಸಾಸಿರಾಕ್ಷನೆ ಎನಗೆ ಲೇಸಿತ್ತು ಸಲಹೊ ||೬||

ಪಡೆದ ತಂದೆಯು ನೀನೆ ಕೊಡುವ ಒಡೆಯನು ನೀನೆ
ಕಡೆಗೆ ಕೈಪಿಡಿದು ಎನ್ನ ರಕ್ಷಿಪನು ನೀನೆ
ಮಡದಿ ಮಕ್ಕಳನೆಲ್ಲ ಬಿದದೆ ಸಲಹುವ ನೀನೆ
ಪೊಡವಿಗಧಿಪತಿಯಾದ ವರಾಹ ತಿಮ್ಮಪ್ಪ ||೭||
*******

No comments:

Post a Comment