Friday 27 December 2019

ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು ankita varaha timmappa

by ನೆಕ್ಕರ ಕೃಷ್ಣದಾಸರು
ಭೈರವಿ ರಾಗ ತ್ರಿವಿಡೆ ತಾಳ

ಕಾಣದಿದ್ದರೆ ನಮ್ಮ ಪ್ರಾಣ ಉಳಿಯದು
ಜಾಣರಾಯಗೆ ಇಟ್ಟ ಕಾಣಿಕೆಯನು ಕೊಟ್ಟು ||ಪ||

ಕಷ್ಟಗಳೆಲ್ಲವು ಬೆನ್ನಟ್ಟಿ ಬರುವಾಗ
ಕಟ್ಟಿದ ಹರಕೆಗಳೆಲ್ಲವನು
ಸಿಟ್ಟುಮಾಡುವ ಸ್ವಾಮಿ ಇಟ್ಟುಕೊಂಡರೆ ಇನ್ನು
ಮುಟ್ಟಿಸಿಕೊಡಬೇಕಲ್ಲಿ ತಿಮ್ಮಪ್ಪನಲ್ಲಿ ||೧||

ಗಂಡಹೆಂಡತಿಯು ಮಕ್ಕಳು ಸಹವಾಗಿ
ದಂಡು ಮಾಳ್ಪೆವು ತಾವು ಎನುತಲಿ
ಉಂಡೆವು ಸ್ಥಿರವಾರ ಊಟವ ಏಕವ
ಕಂಡು ಬಹರೆ ಹೋಗುವ ದಯವಾಗುವ ||೨||

ಕಟ್ಟಿದ ಕಾಣಿಕೆ ಇಟ್ಟು ಚರಣದಲ್ಲಿ
ಸಾಷ್ಟಾಂಗವು ಎರಗಿದರೆ
ದೃಷ್ಟಿಯಿಂದಲೆ ನೋಡಿ ದಯಮಾಡಿ ಕಳುಹುವ
ಬೆಟ್ಟದ ವರಾಹ ನಮ್ಮಪ್ಪ ತಿಮ್ಮಪ್ಪನು ||೩||
******

No comments:

Post a Comment