Tuesday 15 October 2019

ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿ ankita neleyadikeshava

ರಾಗ : ಶಂಕರಾಭರಣ ತಾಳ : ಆದಿ

ತೀರ್ಥವನು ಪಿಡಿದವರೆಲ್ಲ ತಿರುನಾಮಧಾರಿಗಳೆ ಜನ್ಮ || ಪ ||
ಸಾರ್ಥಕವಿಲ್ಲದವರೆಲ್ಲ ಭಾಗವತರೆ || ಅ ||

ಮೂಗುಪಿಡಿದು ನೀರೊಳಗೆ ಮುಳುಗಿ ಜಪತಪ ಮಾಡಿ
ಭಾಗವತ ಶಾಸ್ತ್ರಗಳನೆಲ್ಲ ಓದಿ
ಬಾಗಿ ಪರಸತಿಯರನು ಬಯಸಿ ಕಣ್ಣಿಡುವಂಥ
ನೀತಿ ತಪ್ಪಿದರೆಲ್ಲ ದೇವ ಬ್ರಾಹ್ಮಣರೆ ? || ೧ ||

ಪಟ್ಟೆನಾಮವ ಬಳಿದು ಪಾತ್ರೆ ಕೈಯಲಿ ಪಿಡಿದು
ಗುಟ್ಟಿನಲಿ ಜಪಿಸುವ ಗುರುತರಿಯದೆ
ಕೆಟ್ಟಕೂಗನು ಕೂಗಿ ಹೊಟ್ಟೆಯನು ಹೊರೆವಂಥ
ಹೊಟ್ಟೆಗುಡುಮಗಳೆಲ್ಲ ಪರಮ ವೈಷ್ಣವರೆ ? || ೨ ||

ಲಿಂಗಾಂಗದೊಳಗಿರುವ ಚಿನುಮಯವ ತಿಳಿಯದೆ
ಅಂಗಲಿಂಗದ ನೆಲೆಯ ಗುರುತರಿಯದೆ
ಜಂಗಮ ಸ್ಥಾವರದ ಹೊಲಬನರಿಯದ ಇಂಥ
ಭಂಗಿ ಮುಕ್ಕುಗಳೆಲ್ಲ ಲಿಂಗವಂತರು ಅಹುದೆ ? || ೩ ||

ಅಲ್ಲಾ ಖುದಾ ಎಂದ ಅರ್ಥವನು ಅರಿಯದೆ
ಮುಲ್ಲಾ ಶಾಸ್ತ್ರದ ನೆಲೆಯ ಗುರುತರಿಯದೆ
ಕಳ್ಳಕೂಗನೆ ಕೂಗಿ ಬೊಗಳಿ ಬಾಯ್ದೆರೆವಂಥ
ಕಳ್ಳರಿಗೆ ತಾ ವೀರಸ್ವರ್ಗ ದೊರಕುವುದೆ ? || ೪ ||

ವೇಷಭಾಷೆಯ ಕಲಿತು ಗೋಸನಿಯ ಕಡೆಗಿಟ್ಟು
ಆಸೆಯನು ತೊರೆಯದೆ ತಪವ ಮಾಡಿ
ವಾಸನೆಯ ಗುರುತಿನಾ ಹೊಲಬನರಿಯದ ಇಂಥ
ವೇಷಧಾರಿಗಳು ಸನ್ಯಾಸಿಗಳು ಅಹುದೆ ? || ೫ ||

ಆರು ಚಕ್ರದನೆಲೆಯ ಅಷ್ಟಾಂಗ ಯೋಗದೊಳು
ಮೂರು ಮೂರ್ತಿಯ ಮೂರು ಕಡೆ ನಿಲಿಸಿ
ಕಾರುಣ್ಯನಿಧಿ ಕಾಗಿನೆಲೆಯಾದಿಕೇಶವನ
ಸೇರಿ ಭಜಿಸಿದವರಿಗೆ ಯಮನ ಬಾಧೆಯುಂಟೆ || ೬ ||
*****

No comments:

Post a Comment