Friday 27 December 2019

ಕಟ್ಟಿಹಾಕುವೆ ನಿನ್ನ ದಿಟ್ಟ ಕೃಷ್ಣನ ankita shyamasundara

by ಶ್ಯಾಮಸುಂದರದಾಸರು
ಕಟ್ಟಿ ಹಾಕುವೆ ನಿನ್ನ ದಿಟ್ಟ ಕೃಷ್ಣನ
ಬೆಟ್ಟದೊಡೆಯನೆ ನಿನ್ನ ಬಿಟ್ಟರೆ ಸಿಗಲಾರೆ ||ಪ||

ತುಂಟತನ ಬೇಡವೆಂದರೂ ಕೇಳದಲೆ
ನೆಂಟನಾಗುವೆ ನೀನು ಗೋಪಾಲರಿಗೆಲ್ಲ
ಒಂಟಿ ನೀನೀಗ ಸಿಕ್ಕಾಗ ಕಟ್ಟದಿರೆ
ಎಂಟೆಂಟು ಸಾವಿರ ಗೋಪಿಯರ ಕೂಡುವಿಯೊ ||೧||

ಕಡುಮೋಹ ಬೀರುತಲಿ ಕಡಗೋಲು ಪಿಡಿದಿರುವೆ
ಒಡೆಯ ನಿನ್ನಯ ಹೇಗೆ ಬಂಧಿಸಿರಲಿ
ಪಡೆದ ಜನನಿಯ ತೆರದಿ ಜಗವ ರಕ್ಷಿಪ ದೇವ
ಬಿಡಲೊಲ್ಲೆ ಬಿಡಲೊಲ್ಲೆ ಭಕ್ತಿ ಪಾಶದಿ ಇಂದೇ ||೨||

ಯುಕ್ತಿಮಾತುಗಳಿಂದ ಮರುಳುಗೊಳಿಸಲು ಬೇಡ
ಮುಕ್ತಿದಾಯಕ ನಿನ್ನ ಬೇಡಿಕೊಳ್ಳುವೆ
ಶಕ್ತ ಗುರುಶಾಮಸುಂದರನೆ ನೀನಾಗಿ
ಭಕ್ತರಾಧೀನನಾಗುತಲಿ ಕರನೀಡೆ ||೩||
*******

No comments:

Post a Comment