Monday 6 September 2021

ವಂದನೆಯ ಮಾಡುವೆ ಬಂಧನ ಬಿಡಸೋ ankita tirumaleshahari vittala ರಾಘವೇಂದ್ರ ಸ್ತವನ raghavendra stavana

 ankita ತಿರುಮಲೇಶಹರಿವಿಠಲ 

ಶ್ರೀರಾಘವೇಂದ್ರ ಸ್ತವನ - ಜಾನಪದ ಧಾಟಿ


ವಂದನೆಯ ಮಾಡುವೆ ಬಂಧನ ಬಿಡಸೋ

ತಂದೆ ಗೋವಿಂದಗತಿಪ್ರಿಯಾ

ತಂದೆ ಗೋವಿಂದಗತಿಪ್ರಿಯ ರಾಘವೇಂದ್ರ

ನಂದ ಕಂದಾನ ಒಮ್ಮೆ ತೋರಿಸೋ 


ಸ್ವಚ್ಚವಾದ ತುಂಗಭದ್ರೆ ಮಂಚಾಲೆ ಗ್ರಾಮ

ಅಚ್ಯುತದೇವನ ಪೂಜಾರ್ಯ

ಅಚ್ಯುತದೇವನ ಪೂಜಾರ್ಯ ರಾಘವೇಂದ್ರ

ಸ್ವಚ್ಚಮನಸಿಗೆ ಒಲಿಯುವನೂ  1

ಹೊಚ್ಚ ಹೊನ್ನಿನ ಬಣ್ಣ ಅಚ್ಚ ವೈಷ್ಣವನೀತ

ಬಿಚ್ಚು ಮನಸೀನ ಗುರುಗಳೂ

ಬಿಚ್ಚು ಮನಸೀನ ಗುರುಗಳು ರಾಘವೇಂದ್ರ

ತುಚ್ಚ ಮನಸೀಗೆ ನಿಲುಕರೋ  2

ಅರವಿಂದ ನಯನ ಸುಂದರ ವದನ

ಅಂದದ ಮೂರುತಿ ಗುರುರಾಯ

ಅಂದದ ಮೂರುತಿ ಗುರುರಾಯ ರಾಘವೇಂದ್ರ

ಬಂದ ಭಕುತರ ಸಲಹುವನೂ  3

ತುಂಬಿದ ಕಡಲಿಗೆ ಅಂಬೀಗನೀತ

ಹಂಬಲ ತುಂಬುವ ಕರುಣಾಳು

ಹಂಬಲ ತುಂಬುವ ಕರುಣಾಳು ರಾಘವೇಂದ್ರ

ನಂಬೀದ ಭಕುತರ ಕೈಬಿಡನೂ  4

ಶುದ್ಧಶಿಲೆಯಾ ಮುದ್ದು ಬೃಂದಾವನ

ಕದ್ದು ಕೃಷ್ಣನಾ ಕುಣಿಸುವನು

ಕದ್ದು ಕೃಷ್ಣನಾ ಕುಣಿಸುವ ರಾಘವೇಂದ್ರ

ಸದ್ದು ಮಾಡದೆ ಸಲಹುವನು  5

ತಿರುಮಲೇಶಹರಿವಿಠಲರಾಯನ

ನಿರುತದಿ ಭಜಿಸುವ ಮಹನೀಯ

ನಿರುತದಿ ಭಜಿಸುವ ಮಹನೀಯ ರಾಘವೇಂದ್ರ

ಹರಿಪುರ ದಾರಿಯ ತೋರುವನು  6

***


No comments:

Post a Comment