Monday 2 August 2021

ಪರಮ ಪುರುಷ ಶ್ರೀ ರಾಮನ ಪದಯುಗ ankita gopalakrishna vittala

ಪರಮಪುರುಷ ಶ್ರೀ ರಾಮನ ಪದಯುಗ

ಹರುಷದಿ ಸ್ಮರಿಸುವ ಹನುಮಂತ

ಸಿರಿರಮಣ ನಿಜದಾಸನೆಂದೆನಿಸಿದ

ವರ ಕದರುಂಡಲಿ ಹನುಮಂತ ಪ.


ಒಂದೇ ಮನದಲಿ ತಂದೆ ನಿನ್ನಡಿಗಳ

ಪೊಂದಿದೆ ಸಲಹೈ ಹನುಮಂತ

ಕುಂದುಗಳೆಣಿಸದೆ ಕಂದನ ತೆರದಲಿ

ಎಂದೆಂದಿಗು ಪೊರೆ ಹನುಮಂತ 1

ವಾರಿಧಿ ದಾಟುತ ಸೇರುತ ಅರಿಪುರ

ಧಾರುಣಿಜೆಯ ಕಂಡೆ ಹನುಮಂತ

ನಾರಿಚೋರನಪುರ ಸೇರಿಸಿ ಅನಲಗೆ

ಸೇರಿದೆ ರಾಮನ ಹನುಮಂತ 2

ಕೃಷ್ಣನ ಸೇವಿಸಿ ದುಷ್ಟರ ಕೊಲ್ಲುತ

ಮೆಟ್ಟಿದೆ ಖಳರನು ಹನುಮಂತ

ದಿಟ್ಟತನದಿ ಸಾಮ್ರಾಜ್ಯವಾಳಿ ಜಗ-

ಜಟ್ಟಿ ಎಂದೆನಿಸಿದೆ ಹನುಮಂತ 3

ಮಿತಿಯಿಲ್ಲದ ಅತಿಖತಿ ಮತಗಳನು

ಹತಗೈಸುತ ನೀ ಹನುಮಂತ

ಪ್ರತಿ ಗ್ರಂಥಗಳನ್ನು ಸ್ಥಾಪಿಸಿ ಸುರರಿಗೆ

ಅತಿ ಹಿತ ತೋರಿದೆ ಹನುಮಂತ 4

ಇಷ್ಟ ಫಲಪ್ರದ ತುಷ್ಟಿಬಡಿಸೊ ನೀ

ಕೊಟ್ಟೀಗಭಯವ ಹನುಮಂತ

ದಿಟ್ಟ ನಿನ್ನಡಿಗಳ ಭಜಿಸುವೆ ಗೋಪಾಲ

ಕೃಷ್ಣವಿಠ್ಠಲ ಪ್ರಿಯ ಹನುಮಂತ5

****


No comments:

Post a Comment