Monday 6 September 2021

ಏಳಯ್ಯ ಗುರುರಾಜ ಏಳಯ್ಯ ರವಿತೇಜ ankita pandarinatha vittala

  ankita ಪಂಡರೀನಾಥವಿಠಲ

ಸುಪ್ರಭಾತ

ರಾಗ: [ಭೌಳಿ] ತಾಳ: [ಖಂಡಛಾಪು]


ಏಳಯ್ಯ ಗುರುರಾಜ ಏಳಯ್ಯ ರವಿತೇಜ

ಏಳಯ್ಯ ಏಳು ಬೆಳಗಾಯಿತೂ


ಧೂಳಿದರುಶನಕಾಗಿ ಭಕುತರೆಲ್ಲರು ಬಂದು

ಕಾದಿಹರು ಕಾತರದಿ ಗುರು ರಾಘವೇಂದ್ರಾ ಅ.ಪ


ಯತಿ ಸುಧೀಂದ್ರರ ಕರಜ ಕ್ಷಿತಿಯೊಳಗೆ ಅಪ್ರತಿಮ

ಪ್ರತಿಗಾಣೆ ಮಂತ್ರಾಲಯನಿಲಯಾ

ಸತತ ಭಕ್ತೋದ್ಧಾರ ಸ್ತುತ್ಯ ನೀ ಗುಣಸಾಂದ್ರ

ಮತಿಯಿಂದ ಸ್ತುತಿಸುವೆನು ನಿಮ್ಮಂಘ್ರಿ ನಾನೂ 1

ವರಹಜೆಯ ತೀರಗನೆ ವರಹದೇವರ ಕರುಣ

ನಿರುತ ಪಾತ್ರನೆ ಮೌನಿ ಕುಲಶ್ರೇಷ್ಠಗುರುವೇ

ಪರಮಾತ್ಮ ಭೂಮಿಜೆಪತಿ ರಾಮಪದಭೃಂಗ

ಸುರತರುವೆ ಚಿಂತಾಮಣಿ ಕಲ್ಪವೃಕ್ಷಾ 2

ಶಂಕುಕರ್ಣನು ನೀನು ಪ್ರಹ್ಲಾದ ವ್ಯಾಸ ಮುನಿ

ವೆಂಕಟೇಶನ ದಯದಿ ಗುರು ರಾಘವೇಂದ್ರಾ

ಮಂಕುಮಾನವ ನಾನು ಶಂಕೆಯಿಲ್ಲದೆ ಕಾಯೋ

ಕಿಂಕರಾಗ್ರೇಸರನೆ ನಿನ್ನ ಸರಿ ಯಾರೂ 3

ದ್ವಾರದೊಳು ಕಾದಿಹರು ಕೋವಿದರು ಭಕ್ತಿಯಲಿ

ದಾರಿತೋರಿಸಿ ಗುರುವೆ ಮುಕ್ತಿ ಮಂಟಪಕೇ

ವೀರವೈಷ್ಣವ ಯತಿಯೆ ಕಾದಿಹರು ದರುಶನಕೆ

ಪಾರಗಾಣದ ಮಹಿಮೆ ಕೇಳಿ ಬಂದಿಹರೂ 4

ದಾಸರೆಲ್ಲರು ಸೇರಿ ನಿನ್ನ ಕೀರ್ತಿಸುತ್ತಿಹರು

ಶ್ರೀಶ ಕೃಷ್ಣನ ಭಜಕ ಕರುಣವಾರಿಧಿಯೇ

ಏಸೇಸೋ ಜನ್ಮದ ದೋಷವೆಲ್ಲವು ನಾಶ

ವಾಸವಾನುತ ಹರಿಯ ದಾಸ ನಿನನೀಕ್ಷಿಸಲು 5

ಸಂತಾನ ಸಂಪತ್ತು ಸುಜ್ಞಾನ ಭಕುತಿಯನು

ಸಂತಸದಿ ಕೊಡುವಂಥ ಶ್ರೀಮಂತ ನೀನೂ

ಸಂತರಿಂ ವಂದಿತನೆ ಸುಗುಣಸಾಗರ ಗುರುವೆ

ಸಂತತವು ತವಸ್ಮರಣೆ ಬರಲಿ ನಾಲಿಗೆಗೇ 6

ನಾರಿಯರು ನಿಂದಿಹರು ಆರತಿಯ ತಂದಿಹರು

ನೀರಜಾಕ್ಷನ ಕಂಡ ಕಾಷಾಯಧಾರೀ

ಸಾರುತ್ತ ನಿನ್ನ ಕೀರ್ತಿ ಕಾದಿಹರು ಕಾತರದಿ

ತೋರಯ್ಯ ಮುಖ ಕಮಲ ಮೂರಾವತಾರೀ 7

ಪರಿಮಳಾಚಾರ್ಯ ಗುರು ಪಾಲಿಪುದು ಕೃಪೆ ತೋರಿ

ದುರಿತ ದುಷ್ಕರ್ಮಗಳ ತರಿದು ಬೇಗ

ವರಭಕ್ತಿ ಜ್ಞಾನ ವೈರಾಗ್ಯ ಪಾಲಿಸು ಎನಗೆ

ಕರುಣದಲಿ ಶ್ರೀಹರಿಯ ದಾಸನಾದವಗೆ 8

ಮಂಗಳಾಂಗನ ಹೃದಯಕಮಲದೊಳು ತಂದು ನರ-

ಸಿಂಗ ಮೂರುತಿ ಕಾಂಬ ಭಾಗ್ಯವನೆ ಕೊಟ್ಟು

ಭಂಗ ಭವ ಬಿಡಿಸಿ ಪೊರೆ ಕಂಗಳಿಗೆ ಕಾಣುತ್ತ

ರಂಗ ಪಂಢರಿನಾಥವಿಠಲನ ದಾಸಾ 9

***


No comments:

Post a Comment