Sunday, 31 January 2021

ಸ್ಮರಿಸುವುದು ರಘುನಂದನನ ankita gadugina veeranarayana

ಶ್ರೀ ಹುಯಿಲಗೋಳ ನಾರಾಯಣರಾಯರ ಕೃತಿ


 ರಾಗ -  :  ತಾಳ -


ಸ್ಮರಿಸುವುದು ರಘುನಂದನನ ll ಪ ll


ನಿರುತದಿ ಬೆಳಗಿನೊಳೆದ್ದು ಭಕುತಿಯಲಿ ll ಅ ಪ ll 


ಜನಪತಿ ದಶರಥನುದರದಿ ಜನಿಸಿದ  

ವನಿತೆ ಅಹಲ್ಯೆಯ ತಾನುದ್ಧರಿಸಿದ

ಘನ ಶಂಕರ ಧನುವ ಭಂಗಿಸಿದ

ಜನಕ ಸುತೆಯ ವರಿಸಿದ ಶ್ರೀರಾಮನ ll ೧ ll


ತಾಯಿ ಕೈಕೇಯಿಯ ಮಾತು ನಡೆಸಿದ

ನೋಯದೆ ವನವನು ಸತಿಸಹ ಸೇರಿದ

ಮಾಯಾಮೃಗದಾಶೆಗೆ ಸತಿಯನಗಲಿದ 

ರಾಯ ಲಕ್ಷ್ಮಣನಣ್ಣ ಶ್ರೀರಾಮನ ll ೨ ll


ದಂಡಕದೊಳು ಸತಿಯನು ಶೋಧಿಸಿದ

ಚಂಡ ಹನುಮಗೆ ತಾ ದೊರೆಯಾದ

ಪುಂಡ ಜಲಧಿಯ ದಾಟಿಸಿದ

ಹೆಂಡತಿ ಇರವನು ತಿಳಿದ ಶ್ರೀರಾಮನ ll ೩ ll


ಜಲಧಿಗೆ ಸೇತುವೆ ನಿಂತು ಬಿಗಿಸಿದ 

ಖಳ ರಾವಣನ ರಣದೊಳು ಕೆಡಹಿದ

ಒಲಿದು ವಿಭೀಷಣನನು ತಾ ಪೊರೆದ

ನೆಲದೊಳು ಸುಖ ಬೀರಿದ ಶ್ರೀರಾಮನ ll ೪ ll


ಧರುಮವ ನೆಲೆಸಲು ದುಷ್ಟರ ತರಿದಾ

ಧರೆಯೊಳು ಶಿಷ್ಟರ ಪೊರೆಯಲು ಬಯಸಿದ

ಸಿರಿಪತಿ ಗದುಗಿನ ವೀರನಾರಾಯಣ 

ನರನಾಗವತರಿಸಿದ ಶ್ರೀರಾಮನ ll ೫ ll

**

No comments:

Post a Comment