Wednesday 1 September 2021

ಪದುಳದಿಂದಲಿ ಪೇಳುವೆ ಲಾಲಿಸುವುದು ಪಾವನಕರವಿದು ankita karigirisha

ರಾಗ: ಮಧ್ಯಮಾವತಿ ತಾಳ: ಆದಿ

ಪದುಳದಿಂದಲಿ ಪೇಳುವೆ ಲಾಲಿಸುವುದು ಪಾವನಕರವಿದು

ಮುದದಿ ಸುಧೀಂದ್ರರ ಬಳಿಯಲಿ ಗುರುವಾರ

ಸುಧಾ ಪಾಠವನೋದಿದಬಗೆಯನು ಅ.ಪ

ಗುರುಗಳಾ ಎದುರಲಿ ತಾವ್‍ಕುಳಿತು ಗುರುಮುಖದಿಂದ

ಬರುವಾ ವಾಕ್ಯಗಳೊಳಗೊಂದಿನಿತು ಬಿಡದಂದದಿ ಮನ

ಸ್ಥಿರವಾಗಿನಿಲಿಸಿ ಕೇಳುತಲಿಂತು ಭಾವವತಾವರಿತು

ಧೃತ

ನಿರುತಮನನದಿಂ ಸ್ಫುರಿತಾರ್ಥಗಳನು

ಇರುಳುಕಾಲದಲಿ ತರಗೆಲೆದೀಪದ

ನೆರೆವಿಲಿ ಬರೆಯುತ ಪರಿಮಳವೆಂಬುವ

ವರವ್ಯಾಖ್ಯಾನವ ವಿರಚಿಸುತ್ತಿದ್ದರು 1

ಸಹಪಾಠಿಗಳೊಡನಾಡದೆ ಸರ್ವರಮನನರತರಾಗಿರೆ ಅವರು

ಸಹನೆಯಿಲ್ಲದೆ ಅದರನುಸಂಧಾನ ತಾವರಿಯದೆ ಬಲು

ಕುಹಕದಿಂದವರಿಗೆ ಅಪಮಾನ ಮಾಡಲು ಅನುದಿನ

ಧೃತ

ಬಹುವಿಧದಲಿ ದೂಷಿಸುತಲಿ ಚಾಡಿಯ

ವಹಿಲದಿ ಪೇಳುತಲಿರೆ ಯತಿವರ್ಯರು

ಸುಹಸಿತಮುಖರಾಗಿ ಕೇಳುತಲೊಂದುದಿನ

ಸಹಜವಿಷಯವವರರಿವಿಗೆ ತಂದರು 2

ಒಂದು ದಿನ ಪಾಠದರೊಂದೆಡೆಯೊಳು ಯತಿಶೇಖರರು ಬೇ-

ಕೆಂದು ನಿಜಶಿಷ್ಯರ ಪರೀಕ್ಷಿಸಲು ವಿವರಣಮಾಡದೆ

ಸಂದೇಹ ತೋರಿಸಿ ತಾವ್‍ಬಿಡಲು ಆದಿನದಿರುಳು

ಧೃತ

ಎಂದಿನಂದದಲಿ ವೇಂಕಟಾರ್ಯರು

ಅಂದಿನ ಪಾಠಕೆ ಕುಂದದ ವ್ಯಾಖ್ಯಾನ

ಚೆಂದದಿ ಬರೆದಿಟ್ಟು ಸಂದನಿದ್ರೆಯೊಳಿರೆ

ಬಂದರಲ್ಲಿಗೆ ಯತೀಂದ್ರ ಸುಧೀಂದ್ರರು 3

ವರಶಿಷ್ಯನ ಬಳಿಯಲಿ ಪರಿಕಿಸಲು ಗುರುವರ್ಯರ ದೃಷ್ಟಿಗೆ

ಬರೆದ ಪತ್ರಗಳ ವಹಿ ಕಾಣಿಸಲು ಕರದಲ್ಲಿ ತೆಗೆದು

ಪರಿಶೀಲಿಸಲಾಗತಿಹರುಷದೊಳು ಮನಉಬ್ಬುತಲಿರಲು

ಧೃತ

ನೆರ ವಾತ್ಸಲ್ಯದಿ ಶಿಷ್ಯನ ನೋಡಲು

ಧರೆಯಮೇಲೆ ಹೊದ್ದಿಕೆಯಿಲ್ಲದೆ ಮಲ-

ಗಿರುವುದ ಕಂಡತಿಮರುಕದಿ ಶಾಲನು

ತ್ವರಿತದಿ ಹೊದ್ದಿಸಿ ಪೊರಟರು ಗುರುಗಳು 4

ಮಾರನೆಯದಿನ ಪಾಠದ ಸಮಯದಲಿ ಹಿಂದಿನಪಾಠಕೆ

ಯಾರು ಅರ್ಥವ ಪೇಳದೆ ಮನದಲಿ ಇರುತಿರೆ ಯತಿವರ

ತೋರಿಸಿ ಪೇಳಿದವರವರೆದುರಲ್ಲಿ ಪರಿಮಳ ವ್ಯಾಖ್ಯಾನ

ಧೃತ

ಸ್ವಾರಸ್ಯವು ಮನಕೇರಲು ಶಿಷ್ಯರು 

ಭೂರಿಕ್ಷಮಾಪಣೆ ಬೇಡಲು ವೇಂಕಟ

ಆರ್ಯರ ಪರಿಮಳಾಚಾರ್ಯರೆಂದೆನ್ನುತ

ಸಾರಿಕರೆದರು ಕರಿಗಿರೀಶನ ಸ್ಮರಿಸುತ 5

***


No comments:

Post a Comment