Monday 2 August 2021

ನೀನಲ್ಲದಲೆ ಇನ್ನು ನಾನಾರ ಕೂಗಲೊ ಮಾನನಿಧಿ ankita gopalakrishna vittala

ನೀನಲ್ಲದಲೆ ಇನ್ನು ನಾನಾರ ಕೂಗಲೊ

ಮಾನನಿಧಿ ಗೋಪಾಲ ಶ್ರೀನಿಧಿಯೇ ಪ.


ಶ್ರೀನಿವಾಸನೆ ಎನ್ನ ನಾನಾ ಪರಿಯ ಕಷ್ಟ

ನೀನೆ ಬಿಡಿಸಿ ಸಲಹೊ ಮಾನಾಭಿಮಾನದೊಡೆಯ ಅ.ಪ.


ಕಡುಕೋಪದಿಂ ಖಳನು ಹುಡುಗನ ಬಾಧಿಸೆ

ದೃಢ ಭಕ್ತಿಯಿಂದ ನಿನ್ನಡಿಯ ಭಜಿಸೆ

ಘುಡು ಘುಡಿಸುತ ಕಂಭವ ಒಡದು ಆ ಕ್ಷಣ ಬಂದು

ಕೆಡಹಿ ಅಸುರನ ಕೊಂದು ಒಡನೆ ಭಕ್ತನ ಕಾಯ್ದೆ 1

ತೊಡೆಯನೇರಲು ಬರೆ ಜಡಿದು ನೂಕಲು ತಾಯಿ

ಒಡನೆ ಮನದಿ ನೊಂದು ಪೊಡಮಡುತ

ಅಡವಿ ಅಡವಿ ತಿರುಗಿ ದೃಢದಿ ಭಜಿಸೆ ಧ್ರುವ

ಒಡನೆ ಓಡಿ ಬಂದು ದೃಢಪಟ್ಟ ಕೊಡಲಿಲ್ಲೆ 2

ಮಡುವಿನೊಳ್ ಕರಿ ಕರೆಯೆ ತಡೆಯದೆ ಸಲಹಿದ

ಪೊಡವೀಶ ನೀನಲ್ಲೆ ಕಡುಕರುಣಿ

ಬಡವಗೆ ಸಿರಿಯಿತ್ತೆ ಮಡದಿಗಕ್ಷಯವಿತ್ತೆ

ಕಡುದ್ರೋಹಿಗಳ ಕೊಲಿಸಿ ಒಡನೆ ಐವರ ಕಾಯ್ದೆ3

ಚಿನುಮಯ ಗುಣಪೂರ್ಣ ಅಣು ಮಹತ್ ಅಂತರಾತ್ಮ

ಎಣಿಸಲಾಹೊದೆ ನಿನ್ನ ಘನ ಮಹಿಮೆ

ಮನ ಮಧ್ವಮಂದಿರ ಮನಸಿಜಪಿತ ಸರ್ವ

ಮನನಿಯಾಮಕ ಹರಿ ಮನದಲ್ಲಿ ನೀ ನಿಲ್ಲೊ 4

ಶ್ರೀಪದ್ಮಭವನುತ ನಾ ಪಾಮರಾಳಿಹೆ

ಗೋಪಾಲಕೃಷ್ಣವಿಠಲ ಶ್ರೀಪತಿಯೆ

ನೀ ಪಾರು ಮಾಡದೆ ಕಾಪಾಡುವವರ್ಯಾರೊ

ಗೋಪಕುವರ ಪೇಳೋ ತಾಪ ಬಿಡಿಸಿ ಸಲಹೋ5

****


No comments:

Post a Comment