Saturday 2 November 2019

ಯಾಕೆ ಕಿರಿಕಿರಿ ಮಾಡುತಿ ನೀನ್ಯಾಕೆ ankita prasannavenkata YAAKE KIRIKIRI MAADUTI NEENYAKE

Audio by Mrs. Nandini Sripad

ಶ್ರೀ ಪ್ರಸನ್ನ ವೆಂಕಟದಾಸರ ಕೃತಿ 

 ರಾಗ ಸಿಂಧುಭೈರವಿ           ಆದಿತಾಳ 

ಯಾಕೆ ಕಿರಿಕಿರಿ ಮಾಡುತಿ ನೀ -
ನ್ಯಾಕೆ ಕಿರಿಕಿರಿ ಮಾಡುತಿ ॥ ಪ ॥
ಭಕ್ತವತ್ಸಲ ಭಯನಿವಾರಣ ಬಟ್ಟಲು ಬಾರಿಸಲೇನೋ ॥ ಅ ಪ ॥

ನೀರೊಳು ಮುಳುಗಿದೆ ಏನೋ ನಿನಗೆ ನೆಗಡಿಯಾಯಿತೇನೋ ।
ಭಾರವ ಪೊತ್ತು ನಿನ್ನ ಬೆನ್ನು ನೊಂದಾವೇನೋ ॥
ಧಾರುಣಿ ಬಗೆದು ನಿನ್ನ ದಾಡಿ ನೊಂದಾವೇನೋ ।
ದುರುಳ ಹಿರಣ್ಯಕನ ಬಗೆದು ಬೆರಳು ನೊಂದಾವೇನೋ ॥ 1 ॥

ಭೂಮಿಯ ಅಳೆದು ನಿನ್ನ ಪಾದ ನೊಂದಾವೇನೋ ।
ರಾಯರಾಯರ ಗೆದ್ದು ಬಾಹು ನೊಂದಾವೇನೋ ॥
ಸೇತುವೆ ಕಟ್ಟಿ ನಿನ್ನ ರಟ್ಟೆ ನೊಂದಾವೇನೋ ।
ಅಷ್ಟಮ ಸ್ತ್ರೀಯರನ್ನಾಳಿ ತೋಳು ನೊಂದಾವೇನೋ ॥ 2 ॥

ಬತ್ತಲೆ ನಿಂದು ನಿನಗೆ ಚಳಿಯಾಯಿತೇನೋ ।
ಉತ್ತಮ ತೇಜಿಯನೇರಿ ಪಿತ್ತ ಹತ್ತಿತೇನೋ ॥
ನಾರದ ಗುರುವಿಗೆ ನಾನು ಹೇಳಿ ಕಳಿಸಲೇನೋ ।
ಮಾಯದ ಕಪ್ಪು ನಿನ್ನ ಮೋರೆಗೆ ಹಚ್ಚಿಸಲೇನೋ ।
ಬಾಲ ಲಕುಮಿಲೋಲ ಪ್ರಸನ್ನವೆಂಕಟ ಕೃಷ್ಣ ॥ 3 ॥
********

No comments:

Post a Comment