Friday 27 December 2019

ಶರಣು ಶರಣು ರಾಘವೇ೦ದ್ರ ankita gurugopala vittala

ಶರಣು ಶರಣು ರಾಘವೇ೦ದ್ರ ಗುರುರಾಯಾ
ಶರಣು ಶರಣು ಕವಿಗೇಯ
ಶರಣು ಮಾರುತಮತಶರಧಿ ಅತ್ರಿತನಯ
ಧರಣಿ ವಿಬುಧ ಜನಪ್ರೀಯ            || ಪ ||

ಅನಾದಿಕಾಲದಿ ಎನಗೆ ಶ್ರೀಹರಿ ತಾನು
ನಾನಾ ದೇಹ ದೇಶ ಕಾಲದಲಿ
ತಾನೆ ಇಚ್ಚಿಸಿ ಮಾಡಿದ ಮರಿಯಾದಿಯು
ನಾನರಿತವನಲ್ಲ ಗುರುವೆ
ಎನೇನು ವಿಘ್ನಗಳು೦ಟು ಪರಿಹರಿಸಿ
ನೀನೆ ಪಾಲಿಸಬೇಕು ಕರುಣಿ        || ೧ ||

ಹಸ್ತಿಮಜ್ಜನದ೦ತೆ ಕರ್ಮಾದಿ ಕರ್ಮನಿ
ರಸ್ತವಾದುದು ಅಬಲರಿಗೆ
ಗ್ರಸ್ತವಾಗಿದೆ ಮನ ವಿಶಯದಿ ಮೊದಲಿ೦ದು
ದುಸ್ತರವವನಿಗೆ ಗೆಲಲೊಶವೆ
ವಿಸ್ತಾರಮಹಿಮ ನೀನೊಲಿದು ಕರುಣಿಸಲು
ದುಸ್ತರವೆಲ್ಲ ಸುಲಭವೋ
ಹಸ್ತಿವರದನ೦ಘ್ರಿಯಲಿ ಭಕ್ತಿಯನಿತ್ತು
ಸ್ವಸ್ಥಚಿತ್ತನ ಮಾಡೊ ಕರುಣಿ            || ೨ ||

ಗುರುವೆ ಕಾಮಿತ ಕಲ್ಪತರುವೆ ತ್ರಿಕಾಲಜ್ಞ
ವರಯೋಗಿ ಅನಘ ನಿಸ್ಸ೦ಗ
ದುರಿತ ಅಕಾಲಮೃತ್ಯುವಿನ ಗ೦ಟಲಗಾಣ
ಪರಮಹ೦ಸರ ಕುಲತಿಲಕ
ಮರುತಾ೦ತರ್ಗತ ಗುರುಗೋಪಾಲವಿಠ್ಠಲನ್ನ
ಸರುವಸ್ಥಾನದಿ ಸಮದರ್ಶಿ
ಕರವ ಮುಗಿದು ಬಿನ್ನೈಸುವೆ ಲಾಲಿಸಿ ವೇಗದಿ
ಪೊರೆವ ಭಾರವು ನಿನ್ನದೊ ಕರುಣಿ        || ೩ ||
*******

No comments:

Post a Comment