ಏನೆ ಮನವಿತ್ತೆ ಲಲಿತಾಂಗಿ
ಅಸ-ಮಾನ ಗೋವಳ ಕುಲವಿಲ್ಲದವನೊಳು ||pa||
ಮಗಗೆ ಮೈದುನನಾದ ಮಗಳಿಗೆ ಪತಿಯಾದ
ಮಗಳಿಗಳಿಯನಾದ ಅಳಿಯಗಳಿಯನಾದ ||1||
ಮಗಳ ಮಗಗೆ ಮೈದುನನಾಗಿ ಮಾವನ
ಜಗವರಿಯಲು ಕೊಂದ ಕುಲಗೇಡಿ ಗೋವಳ ||2||
ಅತ್ತೆಗೆ ವಲ್ಲಭನಾದ ಭೃತ್ಯರಿಗಾಳಾದ
ಚಿತ್ತ ಒಲಿದು ಚೆನ್ನ ಆದಿಕೇಶವನೊಳು||3||
***
Ene manavitte lalitaangi || pa ||
Asamaana govugala kulavilladavanolu || a. Pa. ||
Magage maidunanaada magalige patiyaada |
Magaligaliyanaada aliyagaliyanaada || 1 ||
Magala magage maidunanaagi maavana |
Jagavariyalu konda kulagedi govugala || 2 ||
Attege vallabhanaada bhrutyarigaalaada |
Chittavolidu namma aadikeshavanolu || 3 ||
****
ಏನೆ ಮನವಿತ್ತೆ ಲಲಿತಾಂಗಿ l
ಅಸಮಾನ ಗೋವಳ ಕುಲವಿಲ್ಲದವನೊಳು ll
ಮಗಗೆ ಮೈದುನನಾದ l ಮಗಳಿಗೆ ಪತಿಯಾದ l ಮಗಳಿಗಳಿಯನಾದ l ಅಳಿಯಗಳಿಯನಾದ ll 1 ll
ಮಗಳ ಮಗಗೆ ಮೈದುನನಾಗಿ l ಮಾವನ ಜಗವರಿಯಲು ಕೊಂದ ಕುಲಗೇಡಿ ಗೋವಳ ll 2 ll
ಅತ್ತೆಗೆ ವಲ್ಲಭನಾದ l ಭೃತ್ಯರಿಗಾಳಾದ l ಚಿತ್ತ ಒಲಿದು ಚೆನ್ನ ಆದಿಕೇಶವನೊಳು ll 3 ll
ಭಾವಾರ್ಥ — ನಿನಗೆ ಸರಿಸಮಾನನಲ್ಲದ ಈ ಗೋವಳ ಗೋಪಾಲನಿಗೆ ಏಕಮ್ಮ ನೀನು ಮನವನ್ನಿತ್ತೆ ಲಕ್ಷ್ಮೀ?
(1)
ಮಗಗೆ ಮೈದುನನಾದ — ನರಕಾಸುರ ಮತ್ತು ಸೀತೆ ಭೂದೇವಿಯ ಮಕ್ಕಳು. ಭೂದೇವಿಯು ವಿಷ್ಣುವಿನ ಹೆಂಡತಿಯೂ ಹೌದು. ಆಗ ನರಕಾಸುರನು ವಿಷ್ಣುವಿನ ಮಗನೂ ಆದಂತಾಯಿತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ನರಕಾಸುರನಿಗೆ ಮೈದುನ - ಭಾವನಾದಂತಾಯಿತು.
ಮಗಳಿಗೆ ಪತಿಯಾದ — ಭೂದೇವಿಯ ಮಗಳಾದ ಸೀತೆ ವಿಷ್ಣುವಿಗೂ ಮಗಳಾದಂತಾಯ್ತು. ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಪತಿಯಾದಂತಾಯ್ತು.
ಮಗಳಿಗೆ ಅಳಿಯನಾದ - ವಿಷ್ಣುವಿನ ಪಾದದಿಂದ ಗಂಗೆ ಉದ್ಭವವಾದ್ದರಿಂದ ವಿಷ್ಣುವಿಗೆ ಮಗಳಾದಂತಾಯ್ತು, ಅವಳು ಸಮುದ್ರರಾಜನ ಪತ್ನಿಯಾಗುತ್ತಾಳೆ. ಸಾಗರನ ಮಗಳು ಲಕ್ಷ್ಮಿಯನ್ನು ವಿಷ್ಣು ಕೈ ಹಿಡಿದದ್ದುಂದ ಸಾಗರನಿಗೆ ಅಳಿಯನಾದಂತಾಯಿತು.ಆಗ ಮಗಳಾದ ಗಂಗೆಗೂ ಅಳಿಯನಾದಂತಾಯ್ತು.
ಅಳಿಯಗಳಿಯನಾದ — ವಿಷ್ಣುವಿನ ಮಗಳಾದ ಗಂಗೆಯನ್ನು ಸಾಗರ ಮದುವೆ ಯಾದ್ದರಿಂದ ಸಾಗರ ವಿಷ್ಣುವಿಗೆ ಅಳಿಯನಾದ, ಸಾಗರನ ಮಗಳು ಲಕ್ಷ್ಮಿಯನ್ನು ತಾನು ಮದುವೆಯಾದ್ದರಿಂದ ಅಳಿಯನಾದ ಸಾಗರನಿಗೆ ವಿಷ್ಣುವು ಅಳಿಯನಾದಂತಾಯಿತು.
(2)
ಮಗಳ ಮಗಗೆ ಮೈದುನನಾಗಿ — ಲಕ್ಷ್ಮಿ, ಚಂದ್ರ ಇಬ್ಬರೂ ಸಾಗರನ ಮಕ್ಕಳು. ವಿಷ್ಣುವಿನ ಪುತ್ರಿ ಗಂಗೆಯು ಸಾಗರನ ಹೆಂಡತಿಯಾದ್ದರಿಂದ ಚಂದ್ರ ಅವಳಿಗೂ ಮಗನಾದಂತಾ ಯಿತು. ಚಂದ್ರನ ಸಹೋದರಿಯಾದ ಲಕ್ಷ್ಮಿಯನ್ನು ವಿಷ್ಣುವು ಮದುವೆಯಾದ್ದರಿಂದ ವಿಷ್ಣುವು ಚಂದ್ರನಿಗೆ ಮೈದುನ = ಭಾವನಾದಂತಾಯಿತು.
ಮಾವನ ಕೊಂದ ಕುಲಗೇಡಿ ಗೋವಳ— ಮಾವನಾದ ಕಂಸನನ್ನು ಕೊಂದ ಕುಲಕಂಟಕನಾದ ಕೃಷ್ಣ .
(3)
ಅತ್ತೆಗೆ ವಲ್ಲಭನಾದ — ವಿಷ್ಣುವು ರಾಮಾವತಾರದಲ್ಲಿ ಸೀತೆಯನ್ನು ಮದುವೆಯಾದ್ದರಿಂದ ಸೀತೆಯ ತಾಯಿಯಾದ ಭೂದೇವಿ ಅತ್ತೆಯಾಗಬೇಕು. ಆದರೆ ಭೂದೇವಿ ವಿಷ್ಣುವಿಗೆ ಹೆಂಡತಿಯೂ ಆದದ್ದರಿಂದ ಅತ್ತೆಗೆ ಗಂಡನಾದಂತಾಯ್ತು.
ಭೃತ್ಯರಿಗಾಳಾದ — ಸೇವಕರಾದ ಪಾಂಡವರಿಗೆ ಬಂಡಿಯ ಬೋವನಾಗಿ ಕೆಲಸ ಮಾಡುವ ಸೇವಕನಾದ ಶ್ರೀಕೃಷ್ಣ .
ಮುಂಡಿಗೆಯು ಒಗಟಿನಂತಹ ವಿಶಿಷ್ಟವಾದ ರಚನೆ ಇದು. ಹರಿದಾಸರಲ್ಲಿ ಮುಂಡಿಗೆಗಳ ರಚನೆಯನ್ನು ಆರಂಭಿಸಿದ್ದು ಶ್ರೀ ಕನಕದಾಸರು.
(ಸಂಗ್ರಹ)
***
No comments:
Post a Comment