Friday 27 December 2019

ಯುಗ ಯುಗದಿಂದಲಿ ಬಗೆ ಬಗೆಯಿಂದಲಿ ankita madhwesha krishna

ವಾಮನಾವತಾರ

ಯುಗ ಯುಗದಿಂದಲಿ ಬಗೆ ಬಗೆಯಿಂದಲಿ
ಜಗವನೆ ಪೊರೆಯುವ ದೇವನು
ಖಗವಾಹನನೆ ವಟು ವಾಮನನಾಗಿ
ಭುವಿಯೊಳು ಜನಿಸಿದನು ಶ್ರೀಶನು||ಪಲ್ಲ||

ಅದಿತಿ ಕಶ್ಶಪರ ಪ್ರೀತಿಯ ಕುವರ
ಜಗವನುಧ್ಧರಿಸುವ ಮಹಾಚತುರ
ಉಪನಯನವನೆ ಹಿತದಿಂದ ಮಾಡಲು
ವಶಿಷ್ಟ ಮೊದಲಾದ ಋಷಿಗಳು ಸೇರಿ||೧||

ವಾಮನನೆಂದು ಹೆಸರನೆ ಇಡುತ
ಜಾತಕರ್ಮವ ಮಾಡಿದರು
ಕೋಟಿ ಗೋದಾನವ ಮಾಡಿದ ಕಶ್ಶಪ
ಕೃಷ್ಣಾರ್ಪಣ ವೆಂದೆನುತ||೨||

ಉಪನಯನವನೆ ಕಶ್ಶಪರು ಮಾಡಲು
ಸರಸ್ವತಿ ಭಾರತಿ ಮುದದಿಂದ
ಉಂಗುರವನೆ ಭಿಕ್ಷವನಿಟ್ಟು
ಆರುತಿನೆತ್ತಿ ಹರುಷದಲಿ||೩||

ದಂಡ ಕಮಂಡಲ ಯಜ್ಞೋಪವೀತವ
ಮುಂಜಿ ಕೃಷ್ಣಾಂಜನ ಧರಿಸಿ
ಅಂದುಗೆ ಕಿರುಗೆಜ್ಜೆ ಘಲ್ಲು ಘಿಲ್ಲೆನ್ನುತ್ತ
ಬಂದ ವಾಮನ ಬಲಿರಾಯನ ಸಭೆಗೆ||೪||

ಯಜ್ಞವೇದಿಕೆ ಏರುತಲಿರಲು
ವಟು ವಾಮನನ ಮುಖದಲ್ಲಿ
ಕೋಟಿ ಸೂರ್ಯ ಪ್ರಭೆ ಮಿಂಚು ಹೊಳೆಯಿತು
ಸುರರು ಪುಷ್ಪದ ವೃಷ್ಟಿ ಕರೆದರಲ್ಲಿ||೫||

ತಾಳ ಮದ್ದಲೆ ಭೇರಿ ಢಮರುಗಳಿಂದ
ಊರ್ವಶಿ ರಂಭೆರ ನಾಟ್ಯಗಳಿಂದ
ಚತುರ್ಮುಖ ಬ್ರಹ್ಮ ಸ್ತೋತ್ರ ಮಾಡಿ
ಪರಮ ಪುರುಷನ ನೋಡಿ ಬೆರಗಾಗಿ||೬||

ದೇವನ ನೋಡಿ ಬಲಿರಾಯ ಬಂದು
ಮುತ್ತಿನ ಮಣಿಯನ್ಹಾಕುತಲಿ
ಹಸ್ತವ ಮುಗಿಯುತ ಭಕ್ತಿಯಿಂದಲಿ ಬಂದು
ಎತ್ತಲಿಂದ ಬಂದಿರೆಂದು ಕೇಳುತಲಿ||೭||

ನಿನ್ನ ಕೀರುತಿ ಕೇಳಿ  ಬಂದೆನೊ ಬಲಿರಾಯ
ನಿನ್ನ ತಾತಂದಿರ ಶೌರ್ಯ ಕೇಳಿ 
ಮೂರು ಪಾದ ಭೂಮಿ ದಾನವ ಬೇಡುವೆ
ಕೊಡು ಎಂದನು ವಟು ವಾಮನನು||೮||

ಯಾಚಕ ಇವನಲ್ಲ ಯೋಚನೆ ಮಾಡೆಂದು
ಶುಕ್ರಾಚಾರ್ಯರುಬಂದು ನುಡಿಯುತ್ತಲಿ
ಕೊಟ್ಟ ಮಾತಿಗೆ ತಪ್ಪುನಲ್ಲವೆಂದು
ಪತ್ನಿಗುದುಕ ತರಲು ತಿಳಿಸಿ ದನು||೯||

ಹೊನ್ನಗಿಂಡಿಲಿಉದುಕವ ತಂದಳು
ವಿಂಧ್ಯಾವಳಿ ರಾಜನ ಸಭೆಯಲ್ಲಿ
ಪಾದವನು ತೊಳೆಯೆ ಸುರನದಿ ಹರಿಯಲು
ಧನ್ಯನಾದೆನೆಂದು ಹಿಗ್ಗಿದನು||೧೦||

ತ್ರಿವಿಕ್ರಮರೂಪಾಗಿ ನಿಂತನು ದೇವನು
ಒಂದು ಪಾದದಿ ಭೂಮಂಡಲವ್ಯಾಪಿಸಿ
ಎರಡನೆ ಪಾದದಿ ಗಗನವ ವ್ಯಾಪಿಸಿ
ಮೂರ ನೆ ಪಾದಕೆ ಸ್ಥಳವೆಲ್ಲಿಯೆನಲು||೧೧||

ನೆತ್ತಿಯಲಿಡೆಂದು ಬಲಿರಾಯ ಪ್ರಾರ್ಥಿಸೆ
ಒತ್ತಿದ ಸುತಳ ಲೋಕಕ್ಕೆ ತಾನು
ಭಕ್ತ ವತ್ಸಲ ಸ್ವಾಮಿ ಬಲಿಯ ಬಾಗಿಲು ಕಾಯ್ವ
ಮುಕ್ತಿಯ  ಕೊಟ್ಟ ಬಲಿರಾಗೆ||೧೨||

ನಾಭಿಕಮಲದಿಂದ ಬ್ರಹ್ಮರಾಯನ ಪಡೆದ
ಪಾದದಿ ಪಡೆದ ಭಾಗೀರತಿಯ
ಅಷ್ಠ ಐಶ್ವರ್ಯ ಸಂಪತ್ತು ಕೊಡುವ
ಮಧ್ವೇಶಕೃಷ್ಣ ನ್ನ ನೆನೆ ಮನವೆ||೧೩||
***********

No comments:

Post a Comment