Friday 27 December 2019

ಸರಿಯಗಾಣೆನೆಲ್ಲಿ ಜಗದೊಳು ಕರವ ankita mohana vittala

ಶ್ರೀ ವಿಜಯದಾಸರು ರಾಮಶಾಸ್ತ್ರಿಯೆಂಬ ವಾದಿಯನ್ನು ಜೈಸಿ ಶ್ರೀವಾದೀಂದ್ರ ಸ್ವಾಮಿಗಳಿಂದ ಮುದ್ರಾಧಾರಣ ಮಾಡಿಸಿ ಆತನಿಗೆ ತತ್ವೋಪದೇಶಗೈದ ಸಂಗತಿಯನ್ನು ಶ್ರೀಮೋಹನ್ನದಾಸರು ಈ ಸ್ತುತಿಯಲ್ಲಿ ವರ್ಣಿಸಿರುವರು

ಪದ : -     ಶ್ರೀರಾಗ, ರೂಪಕ ತಾಳ

ಸರಿಯಗಾಣೆನೆಲ್ಲಿ ಜಗದೊಳು ಕರವ ಮುಗಿರಘವ ತೆಗೆವ | 
ಗುರುವಿಜಯದಾಸರಿಗಿನ್ನು || ಪಲ್ಲ || 

ಭೇದವಿಲ್ಲಯೆಂಬ ಮಾಯವಾದಿ ರಾಮಶಾಸಿ ಬಂದು | 
ಪಾದಕೆರಗೆ ತಮವ ಛೇದಿಸಿ ಸುಜ್ಞಾನವಿತ್ತೆ || ೧ ||   

ವಾದಿಗಿರಿಗೆ ಇಂದ್ರಸ್ಥಾನೀಯರಾದ ಗುರುಗಳಿಂದ ಮು | 
ದ್ರಾಧಾರಣಿಯ ಕೊಡಿಸಿ ಪರಮ ಆದರದಿಂದ ಅವನ ಕಾಯ್ದೆ || ೨ || 

ಭಸುಮವನ್ನೆ ತೆಗಿಸಿ ಅವನ ನೊಸಲಲೂರ್ಧ್ವತಿಲಕ ಪಚ್ಚಿಸಿ | 
ಎಸೆವ ಪಂಚಮುದ್ರಿ ದ್ವಾದಶನಾಮಧರಿಪಂತೆ ಮಾಡಿದ || ೩ || 

ಶ್ರೀಮನೋಹರ ಒಡೆಯ ವಿರಂಚಿ ವ್ಯೋಮಕೇಶ ಸುರರು ಆತನ |
ತಾಮರಸಪದ ಧೂಳಿಗೆ ಯೆಂದು ಈ ಮರಿಯಾದಿಗಳ ಪೇಳಿದೆ|| ೪ ||

ಧರೆಯೊಳಿದ್ದ ಭಕ್ತಜನರ ಪೊರೆವೆನೆಂಬ ಬಿರಿದು ವೊಹಿಸಿ | 
ಸಿರಿ ಮೋಹನ್ನ ವಿಠಲನಂಘ್ರಿ ಸರಸಿರುಹವ ಎನಗೆ ತೋರ್ದೆ || ೫ ||
********

No comments:

Post a Comment