ಆತ್ಮನಿವೇದನೆ
ನರಹರಿಯನು ನೆರೆನಂಬಿದೆನು ನಾನು ಕರುಣಾವಾರಿಧೆ
ಪಾಲಿಸಯ್ಯಾ ಪ
ದುರಿತ ಸಾಗರದಿ ಬಿದ್ದಿರುವೆ ನೀ ಮರೆಯದೆ ತ್ವರದಿ ದಾಟಿಸೋ
ಎನ್ನ ಜೀಯಾ ಅ.ಪ.
ಸ್ನಾನಕ್ಕೆ ಮೈಛಳಿಯಾಯ್ತೋ ಧ್ಯಾನಕ್ಕೆ ಮರುವಾಯ್ತೋ
ದಾನಕ್ಕೆ ಲೋಭ ಅಡ್ಡಾಯಿತೋ
ಮಾನಕ್ಕೆ ಕೋಪಬೀಜವಂಕುರಿಸಿತೋ ಶ್ವಾನನಂದದಿ ಬಾಳಾಯ್ತೋ 1
ಬಲೆಯ ಕಾಣದೇ ಮೃಗ ಫಲಮೆಲುವುದಕ್ಹೋಗಿ
ತಲೆ ಸಿಕ್ಕುತೊಳಲುವ ತೆರದಿ
ಕುಲವೃಕ್ಷ ಕೊನೆಗಿದ್ದ ಫಲದಾಸೆಗೆ ಮಾಯಾ ಬಲೆಯೊಳು
ಬಿದ್ದೆನೊ ಭರದಿ 2
ನರನಾದ ಕುರಿ ನಾನು ಪೊರೆಯುವ ಧೊರೆ ನೀನು
ದುರಿತವ ತರಿದು ಕಾಪಾಡೋ
ವರದ ಶ್ರೀ ಹನುಮೇಶವಿಠಲನೆ ನಿನಗೆ ನಾ ಶರಣಾದೆ
ಕರವ ಬಿಡಬ್ಯಾಡೊ 3
****